ಶ್ರೀರಂಗಪಟ್ಟಣ: ಟೌನ್ ವ್ಯಾಪ್ತಿಯ ಗಂಜಾಂ ಗ್ರಾಮದಲ್ಲಿ ಬುಧವಾರ ಮಳೆ ನೀರು ಸಂಗ್ರಹ ಜಾಗೃತಿ ಅಭಿಯಾನ ನಡೆಯಿತು.
ಸ್ಥಳೀಯ ಪುರಸಭೆ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಗಂಜಾಂನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸೇಂಟ್ ಮೇರೀಸ್ ಶಾಲೆಯ ವಿದ್ಯಾರ್ಥಿಗಳ ತಂಡ ಮುಖ್ಯ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿತು.
ದಾರಿಯುದ್ದಕ್ಕೂ ಮಳೆ ನೀರಿನ ಮಹತ್ವ ಕುರಿತು ಘೋಷಣೆ ಕೂಗಿದ ವಿದ್ಯಾರ್ಥಿಗಳು ಜಾಗೃತಿ ಫಲಕಗಳನ್ನು ಪ್ರದರ್ಶಿಸಿದರು.
ಪುರಸಭೆಯ ಪರಿಸರ ಎಂಜಿನಿಯರ್ ಸಫೀನಾಜ್ ಎಂ.ಜಿ. ಮಾತನಾಡಿ, 'ಮನೆಗಳಲ್ಲಿ ಮಳೆ ನೀರು ಕೊಯ್ಲು ಘಟಕಗಳನ್ನು ಸ್ಥಾಪಿಸಿ ನೀರು ಸಂಗ್ರಹಿಸಬೇಕು. ಮನೆ, ತೋಟ, ಕೃಷಿ ಜಮೀನುಗಳಲ್ಲಿ ನೀರು ಹರಿದು ಹೋಗದಂತೆ ಹಿಂಗು ಗುಂಡಿಗಳನ್ನು ನಿರ್ಮಿಸಬೇಕು. ತ್ಯಾಜ್ಯವನ್ನು ಹಸಿ ಕಸ, ಒಣ ಕಸ, ಸ್ಯಾನಿಟರಿ ತ್ಯಾಜ್ಯ ಮತ್ತು ವಿಶೇಷ ಸ್ಯಾನಿಟರಿ ತ್ಯಾಜ್ಯವನ್ನಾಗಿ ವಿಂಗಡಿಸಿ ತ್ಯಾಜ್ಯ ಸಂಗ್ರಹಿಸಲು ಬರುವ ವಾಹನಕ್ಕೆ ಹಾಕಬೇಕು. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು' ಎಂದು ಹೇಳಿದರು.
'ಸಾರ್ವಜನಿಕರು ತ್ಯಾಜ್ಯವನ್ನು ಚರಂಡಿ ಅಥವಾ ತೆರೆದ ಖಾಲಿ ಜಾಗಗಳಲ್ಲಿ ಹಾಕಬಾರದು. ಹಸಿ ತ್ಯಾಜ್ಯದಿಂದ ತಯಾರಿಸಿದ ಗೊಬ್ಬರವನ್ನು ಪುರಸಭೆ ವತಿಯಿಂದ ಮಾರಾಟ ಮಾಡುತ್ತಿದ್ದು ಆಸಕ್ತರು ಖರೀದಿಸಬಹುದು' ಎಂದು ಆರೋಗ್ಯ ನಿರೀಕ್ಷಕ ದರ್ಶನ್ ತಿಳಿಸಿದರು. ದಿಲೀಪಕುಮಾರ್, ಬೋರೇಗೌಡ, ಶ್ರೀಧರ್, ಶಶಿಕುಮಾರ್, ಮೋಹನ್ ಪಾಲ್ಗೊಂಡಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260807-40-1283962748

