ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ಜೋಸೆಫ್ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಇಂದು (ಭಾನುವಾರ) ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಪ್ರಮಾಣವಚನ ಬೋಧಿಸಲಿದ್ದಾರೆ.
9 ಸಚಿವರು ಪ್ರಮಾಣ…
ಒಂಬತ್ತು ಸಚಿವರು ಇಂದೇ ಪ್ರಮಾಣ ವಚನ ಸಂಬಂಧ ನಿಯೋಜಿತ ಮುಖ್ಯಮಂತ್ರಿ ವಿಜಯ್ ಅವರ ಶಿಫಾರಸನ್ನು ರಾಜ್ಯಪಾಲರು ಅನುಮೋದಿಸಿದ್ದಾರೆ ಎಂದು ಲೋಕಭವನದ ಪ್ರಕಟಣೆ ತಿಳಿಸಿದೆ.
ವಿಜಯ್ ಅವರ ಹೊಸ ಸಂಪುಟದಲ್ಲಿ ನೂತನ ಸಚಿವೆ ಎಸ್. ಕೀರ್ತನಾ ಇರಲಿದ್ದಾರೆ.
ಅಲ್ಲದೆ ಎನ್. ಆನಂದ್, ಕೆ.ಜಿ ಅರುಣರಾಜ್, ಕೆ.ಎ.ಸೆಂಗೊಟ್ಟೈಯನ್, ಆಧವ್ ಅರ್ಜುನ ಮತ್ತು ಸಿ.ಟಿ.ಆರ್ ನಿರ್ಮಲ್ ಕುಮಾರ್, ಎ ರಾಜ್ಮೋಹನ್, ಕೆ.ಟಿ ಪ್ರಭು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.
ಮೊದಲ ದ್ರಾವಿಡಯೇತರ ಸರ್ಕಾರ…
ತಮಿಳುನಾಡಿನಲ್ಲಿ ಸಾಂಪ್ರದಾಯಿಕ ದ್ರಾವಿಡ ಪಕ್ಷಗಳಾದ ಎಐಎಡಿಎಂಕೆ ಮತ್ತು ಡಿಎಂಕೆಗಳ ವಾಡಿಕೆಗಳನ್ನು ಮುರಿದು ವಿಜಯ್ ಅವರ ಟಿವಿಕೆ ಪಕ್ಷವು ಸರ್ಕಾರ ರಚಿಸುತ್ತಿದೆ. ಅಲ್ಲದೆ ರಾಜ್ಯದಲ್ಲಿ ಅಧಿಕಾರಕ್ಕೇರಲಿರುವ ಮೊದಲ ದ್ರಾವಿಡಯೇತರ ಪಕ್ಷವೆನಿಸಿದೆ.
ಮೇ 13ರಂದು ಅಥವಾ ಅದಕ್ಕೂ ಮುನ್ನ ವಿಜಯ್ ಅವರು ತಮಿಳುನಾಡಿನ ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತು ಮಾಡುವ ನಿರೀಕ್ಷೆ ಇದೆ.

