Dailyhunt
ಸಿಂಧನೂರು: ಬೋಧನೆ ಬಹಿಷ್ಕಾರ ನಿರ್ಧಾರ

ಸಿಂಧನೂರು: ಬೋಧನೆ ಬಹಿಷ್ಕಾರ ನಿರ್ಧಾರ

ಸಿಂಧನೂರು: ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರು 6, 7 ಮತ್ತು 8ನೇ ತರಗತಿಗಳನ್ನು ಬೋಧಿಸುವುದನ್ನು ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ಗುರುವಾರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ ಮಾತನಾಡಿ, '2016ಕ್ಕೆ ಮೊದಲು ನೇಮಕವಾದ ಶಿಕ್ಷಕರನ್ನು ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರು (1ರಿಂದ7) ಎಂದು ನೇಮಕಾತಿ ಮಾಡಿಕೊಂಡಿತ್ತು. ನಂತರ 2016 ರಲ್ಲಿ ಸರ್ಕಾರ ಏಕಾಏಕಿ ರಾಜ್ಯದ ಎಲ್ಲ ಶಿಕ್ಷಕರಿಗೆ ಹಿಂಬಡ್ತಿ ನೀಡಿ ಪ್ರಾಥಮಿಕ ಶಾಲಾ ಶಿಕ್ಷಕ (1ರಿಂದ 5) ಎಂದು ಪರಿಗಣಿಸಿದೆ. ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ ಶಿಕ್ಷಕರಿದ್ದರೂ ಸರ್ಕಾರ ಅದನ್ನು ಪರಿಗಣಿಸದೆ 1ರಿಂದ 5 ನೇ ತರಗತಿಗೆ ಸೀಮಿತಗೊಳಿಸಿದೆ.

ಪ್ರಾಥಮಿಕ ಶಾಲಾ ಶಿಕ್ಷಕರು 1 ರಿಂದ 7 ಎಂದು ಪರಿಗಣಿಸುವವರೆಗೂ ಶಿಕ್ಷಕರು ತರಗತಿ ಬಹಿಷ್ಕರಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದರು.

ಸಂಘದ ಜಿಲ್ಲಾ ಸಂಚಾಲಕ ಶಂಕರದೇವರು, ಅಧ್ಯಕ್ಷ ಮಂಜುನಾಥ, ನಿರ್ದೇಶಕರಾದ ಪಕೀರಗೌಡ, ಪರಪ್ಪ ಕರಿಗಾರ, ರವಿಕುಮಾರ್, ದುರುಗಪ್ಪ ಗುಡದೂರು, ಅಮರಯ್ಯ ಪತ್ರಿಮಠ, ಮೋಹನ ರಾಮಕೃಷ್ಣ, ಚಂದ್ರು, ಧರ್ಮರಾಜ್ ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ವ್ಯವಸ್ಥಾಪಕಿ ಸುಮಿತ್ರ ಮನವಿ ಪತ್ರ ಸ್ವೀಕರಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani