ಸಿರಿಗೆರೆ: 'ನಾನು ಮುಖ್ಯಮಂತ್ರಿಯೂ ಅಲ್ಲ, ರಾಜ್ಯದ ಹಣಕಾಸು ಸಚಿವನೂ ಅಲ್ಲ. ಆದರೂ ಕ್ಷೇತ್ರವನ್ನು ಕಡೆಗಣಿಸದೆ ಎಲ್ಲ ಕಡೆಯೂ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆ' ಎಂದು ಶಾಸಕ ಎಂ. ಚಂದ್ರಪ್ಪ ತಿಳಿಸಿದರು.
ಸಿರಿಗೆರೆ ಸಮೀಪದ ಕರಿಯಮ್ಮನಹಟ್ಟಿ ಗ್ರಾಮದಿಂದ ಕೊಳಾಳ್ವರೆಗೂ ₹1 ಕೋಟಿ ವೆಚ್ಚದಲ್ಲಿ ನೂತನ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ಸಲ್ಲಿಸಿ ಅವರು ಮಾತನಾಡಿದರು.
'ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತರುವುದು ಅಷ್ಟು ಸಲೀಸಲ್ಲ. ಆದರೂ ಹೇಗೇಗೋ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇನೆ' ಎಂದರು.
'ರೈತರು ತಮಗೆ ಅತ್ಯಗತ್ಯವಾದ ವಿದ್ಯುತ್ ಮತ್ತು ನೀರು ಕೇಳುತ್ತಾರೆ. ಅದಕ್ಕಾಗಿಯೇ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡು ಅವುಗಳನ್ನು ಅನುಷ್ಠಾನ ಗೊಳಿಸಲು ಕೆಲಸ ಮಾಡುತ್ತಿದ್ದೇನೆ. ಹಲವು ಕಡೆ ಕೆರೆಗಳ ಅಭಿವೃದ್ಧಿ, ಚೆಕ್ ಡ್ಯಾಂಗಳ ನಿರ್ಮಾಣ ಆಗಿದೆ' ಎಂದು ಹೇಳಿದರು.
ಕ್ಷೇತ್ರದಲ್ಲಿನ ಯಾರನ್ನೂ ಕಡೆಗಣಿಸದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಹೊಣೆಗಾರಿಕೆ ನನ್ನ ಮೇಲಿದೆ ಎಂದರು.
ಭರಮಸಾಗರ ಬಿಜೆಪಿ.ಮಂಡಲ ಅಧ್ಯಕ್ಷ ಎನ್.ಟಿ.ಬಸವರಾಜ್, ಉಪಾಧ್ಯಕ್ಷ ಶೈಲೇಶ್ಕುಮಾರ್, ಮಂಜುನಾಥ್, ಎನ್.ಕಲ್ಲೇಶ್, ಚಿಕ್ಕಬೆನ್ನೂರು ಗೌಡ್ರ ತೀರ್ಥಪ್ಪ, ಕೆ.ಬಿ. ಮೋಹನ್, ಬಸವರಾಜ್, ಪ್ರಕಾಶ್, ಎಸ್.ಎಲ್. ಪಂಚಾಕ್ಷರಿ, ತಿಪ್ಪಣ್ಣ, ನಿರಂಜನ್ಮೂರ್ತಿ, ಕೆಂಚವೀರಪ್ಪ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260705-44-1309488380

