ವೇಮಗಲ್: ಹೋಬಳಿಯ ಸೀತಿ ಗ್ರಾಮದ ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಶನಿವಾರ ಆಚರಿಸಲಾಯಿತು.
ಶಾಲೆಯ ನರ್ಸರಿ ವಿಭಾಗದ ಪುಟ್ಟ ಮಕ್ಕಳು ವೈದ್ಯರ ವೇಷಭೂಷಣ ಧರಿಸಿ ಎಲ್ಲರ ಗಮನ ಸೆಳೆದರು.
ಮದ್ದೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆ ಕಾರ್ಯವೈಖರಿಯನ್ನು ವೀಕ್ಷಿಸಿದರು.
ಮದ್ದೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಿ. ಎ. ವನಿತಾ ಮಾತನಾಡಿ, 'ಪ್ರತಿಯೊಬ್ಬರೂ ಬೆಳಗ್ಗೆ ಎದ್ದ ತಕ್ಷಣ ಹಲ್ಲು ಉಜ್ಜಿ, ಕೈಕಾಲು ಮುಖ ತೊಳೆದು ಶುಭ್ರವಾದ ನಂತರವೇ ನೀರು ಅಥವಾ ಹಾಲು ಕುಡಿಯಬೇಕು' ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಿತ್ಯವೂ ಸಮತೋಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆ ಮಾಡಬೇಕು ಎಂದರು.
ದೈಹಿಕ ಹಾಗೂ ಮಾನಸಿಕ ಸದೃಢತೆಗೆ ದೈನಂದಿನ ಜೀವನ ಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆ ಮಾಡಿಕೊಳ್ಳಬೇಕು. ಯಾವುದೇ ರೋಗದ ಲಕ್ಷಣಗಳು ಕಂಡುಬಂದಲ್ಲಿ ವಿಳಂಬ ಮಾಡದೆ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಾಲೆ ಮುಖ್ಯ ಶಿಕ್ಷಕ ಜಿ. ಎಸ್. ಚಂದುಕುಮಾರ್, ವೈದ್ಯಾಧಿಕಾರಿಗಳಿಗೆ ಸಸಿಯನ್ನು ಉಡುಗೊರೆಯಾಗಿ ನೀಡಿದರು.
ಆರೋಗ್ಯ ಜಾಗೃತಿ ಹಾಗೂ ಸಂಭ್ರಮಾಚರಣೆ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಜಿ. ಎಸ್. ಚಂದುಕುಮಾರ್, ವೈದ್ಯಾಧಿಕಾರಿ ಡಾ.ಜಿ.ಎ. ವನಿತಾ, ಶುಶ್ರೂಷಕಿಯರಾದ ವರಲಕ್ಷ್ಮಿ ಮತ್ತು ದೃತಿ, ಶಿಕ್ಷಕವಿ. ಎಂ. ಆನಂದ್, ಮಂಜುನಾಥ್, ಲಕ್ಷ್ಮಿದೇವಮ್ಮ, ಶೈಲಜಾ, ಸುಗುಣ, ಅನಂತ್ ಕುಮಾರ್, ನರಸಿಂಹಮೂರ್ತಿ ಪಾಲ್ಗೊಂಡಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260705-18-1883646147

