ಕೋಲ್ಕತಾ: 'ನಾರದ ಪ್ರಕರಣದ ಇನ್ನೊಬ್ಬ ಆರೋಪಿ, ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಬಿಜೆಪಿಯ ಸುವೇಂದು ಅಧಿಕಾರಿ ಅವರನ್ನೇಕೆ ಬಂಧಿಸಿಲ್ಲ' ಎಂದು ಮಾರುವೇಷದ ಕಾರ್ಯಾಚರಣೆ ನಡೆಸಿದ್ದ ಪತ್ರಕರ್ತ ಮ್ಯಾಥ್ಯು ಸ್ಯಾಮುಯಲ್ ಪ್ರಶ್ನಿಸಿದ್ದಾರೆ.
ನಾರದ ಹಗರಣ: ಟಿಎಂಸಿ ನಾಯಕರಿಗೆ ಸಿಕ್ಕಿದ್ದ ಜಾಮೀನಿಗೆ ತಡೆ, ಪ್ರೆಸಿಡೆನ್ಸಿ ಜೈಲಿಗೆ
'ಟಿಎಂಸಿಯ ನಾಲ್ವರು ಮುಖಂಡರನ್ನು ಸಿಬಿಐ ಅಧಿಕಾರಿಗಳು ಬಂಧಿಸಿರುವುದು ಸಮಾಧಾನಕೊಡುವ ವಿಚಾರ. ಮೂರು ವರ್ಷಗಳ ಹಿಂದೆಯೇ ಇವರ ವಿರುದ್ಧ ಆರೋಪಪಟ್ಟಿ ಸಿದ್ಧವಾಗಿದ್ದರೂ ಕ್ರಮ ಕೈಗೊಳ್ಳಲು ಸಿಬಿಐಗೆ ಸಾಧ್ಯವಾಗಿರಲಿಲ್ಲ. ಆದರೆ, ಬಂಧಿತರ ಪಟ್ಟಿಯಲ್ಲಿ ಸುವೇಂದು ಅವರ ಹೆಸರು ಇಲ್ಲದಿರುವುದಕ್ಕೆ ಬೇಸರವೆನಿಸಿದೆ' ಎಂದು ಸ್ಯಾಮ್ಯುಯಲ್ ಹೇಳಿದ್ದಾರೆ.
ಈ ಹಿಂದೆ ಟಿಎಂಸಿಯಲ್ಲಿದ್ದ ಸುವೇಂದು ಅಧಿಕಾರಿ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು. ನಂದಿಗ್ರಾಮ ವಿಧಾನಸಭೆ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಗೆಲುವು ಸಾಧಿಸಿರುವ ಸುವೇಂದು ಅಧಿಕಾರಿ, ಪಶ್ಚಿಮ ಬಂಗಾಳ ವಿಧಾನಸಭೆ ವಿರೋಧಪಕ್ಷದ ನಾಯಕರಾಗಿದ್ದಾರೆ.
ಏನಿದು ನಾರದ ಹಗರಣ
ನಾರದ ಟಿ.ವಿ ವಾಹಿನಿಯ ಪತ್ರಕರ್ತ ಮ್ಯಾಥ್ಯು ಸಾಮ್ಯುಯಲ್ 2014ರಲ್ಲಿ ಮಾರುವೇಷದ ಕಾರ್ಯಾಚರಣೆ ನಡೆಸಿ, ಟಿಎಂಸಿ ಮುಖಂಡರನ್ನು ಹೋಲುವ ನಾಲ್ವರು ಲಂಚ ಪಡೆಯುತ್ತಿರುವ ವಿಡಿಯೊ ಸೆರೆಹಿಡಿದಿದ್ದರು. 2016ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ವೇಳೆ ಇದು ಬಹಿರಂಗವಾಗಿತ್ತು. ವಿಡಿಯೊದಲ್ಲಿ ಇರುವವರು ಟಿಎಂಸಿ ಸಚಿವರಾದ ಫಿರ್ಹಾದ್ ಹಕೀಮ್, ಸುಬ್ರತ ಮುಖರ್ಜಿ, ಶಾಸಕ ಮದನ್ ಮಿತ್ರ ಮತ್ತು ಸೋವನ್ ಮುಖರ್ಜಿ ಎಂದು ಪರಿಗಣಿಸಿ, ಅವರ ವಿರುದ್ಧ ಆರೋಪ ಹೊರಿಸಲಾಗಿತ್ತು.

