Dailyhunt Logo
  • Light mode
    Follow system
    Dark mode
    • Play Story
    • App Story
ತಮಿಳುನಾಡು | ವಿಜಯ್ ಯುಗಾರಂಭ: ದಳಪತಿ ಸಂಪುಟ ಸೇರಿದ 9 ಮಂದಿ ಸಚಿವರಿವರು

ತಮಿಳುನಾಡು | ವಿಜಯ್ ಯುಗಾರಂಭ: ದಳಪತಿ ಸಂಪುಟ ಸೇರಿದ 9 ಮಂದಿ ಸಚಿವರಿವರು

ಜೋಸೆಫ್ ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಇಂದು (ಭಾನುವಾರ) ಪ್ರಮಾಣ ವಚನ ಸ್ವೀಕರಿಸಿದರು. ಇವರೊಂದಿಗೆ ಒಂಬತ್ತು ಮಂದಿ ಶಾಸಕರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ಕಿರು ಪರಿಚಯ ಇಲ್ಲಿದೆ..

ಕೆ.ಎ.ಸೆಂಗೊಟ್ಟೈಯನ್:

ವಿಜಯ್‌ ಸಂಪುಟ ಸೇರಿದ ಪ್ರಮುಖರಲ್ಲಿ ಎಐಎಡಿಎಂಕೆ ಹಿರಿಯ ನಾಯಕ ಕೆ.ಎ ಸೆಂಗೊಟ್ಟೈಯನ್ ಒಬ್ಬರು.

ಇವರು ದಶಕಗಳ ಕಾಲ ಮಾಜಿ ಮುಖ್ಯಮಂತ್ರಿಗಳಾದ ಎಂಜಿಆರ್ ಮತ್ತು ಜಯಲಲಿತಾ ಅವರೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಇಪಿಎಸ್ ನಾಯಕತ್ವವನ್ನು ಬಹಿರಂಗವಾಗಿ ಪ್ರಶ್ನಿಸಿದ ಮತ್ತು ಉಚ್ಚಾಟಿತ ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತರುವಲ್ಲಿ ಪಕ್ಷ ವಿಫಲವಾಗಿದೆ ಎಂದು ಟೀಕಿಸಿ‌ದಕ್ಕೆ ಸೆಂಗೊಟ್ಟೈಯನ್ ಅವರನ್ನು ಎಐಎಡಿಎಂಕೆಯಿಂದ ಉಚ್ಚಾಟಿಸಲಾಗಿತ್ತು. ಸೆಂಗೊಟ್ಟೈಯನ್ ಅವರ ಆಡಳಿತಾತ್ಮಕ ಅನುಭವ ಹೊಸ ಸರ್ಕಾರಕ್ಕೆ ನೆರವಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಆಧವ್‌ ಅರ್ಜುನ:

ವಿಜಯ್ ಅವರ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಗಳಲ್ಲಿ ಆಧವ್‌ ಅರ್ಜುನ ಕೂಡ ಒಬ್ಬರು. ಟಿವಿಕೆಯ ಸಂಘಟನಾ ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚೆನ್ನೈನ ವಿಲ್ಲಿವಕ್ಕಂ ಕ್ಷೇತ್ರದಿಂದ ಗೆದ್ದಿರುವ ಇವರು, ಲಾಟರಿ ಉದ್ಯಮಿ ಸ್ಯಾಂಟಿಯಾಗೊ ಮಾರ್ಟಿನ್ ಅವರ ಅಳಿಯ.‌

ನಿರ್ಮಲ್‌ ಕುಮಾರ್‌:

ಮಧುರೈನ ತಿರುಪರಂಕುಂದ್ರಂನಿಂದ ಗೆದ್ದ ನಿರ್ಮಲ್ ಕುಮಾರ್ ವಿಜಯ್‌ ಸಂಪುಟ ಸೇರಿದ್ದಾರೆ. ಬಿಜೆಪಿಯ ಮಾಜಿ ಕಾರ್ಯಕರ್ತರಾಗಿದ್ದ ನಿರ್ಮಲ್ ಕುಮಾರ್ ರಾಜಕೀಯ ಪಾಳೆಯ ಬದಲಿಸಿ ದಕ್ಷಿಣ ತಮಿಳುನಾಡಿನಲ್ಲಿ ಟಿವಿಕೆಗೆ ಪ್ರಮುಖ ಮುಖವಾಗಿ ಹೊರಹೊಮ್ಮಿದ್ದಾರೆ.

ಎನ್‌.ಆನಂದ್

ಟಿವಿಕೆ ಪ್ರಧಾನ ಕಾರ್ಯದರ್ಶಿ ಆನಂದ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರು ಚೆನ್ನೈನ ಟಿ.ನಗರ ಕ್ಷೇತ್ರದಿಂದ ಗೆದ್ದಿದ್ದಾರೆ. ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ.

ರಾಜ್‌ ಮೋಹನ್

ವಿಜಯ್‌ ಸಂಪುಟ ಸೇರಿದ ರಾಜ್ ಮೋಹನ್, ತಮ್ಮ ವಾಕ್ಚಾತುರ್ಯದಿಂದಲೇ ಹೆಸರುವಾಸಿಯಾಗಿದ್ದಾರೆ.

ಡಾ. ಟಿ.ಕೆ. ಪ್ರಭು:

ಡಾ.ಟಿ.ಕೆ. ಪ್ರಭು ಅವರು ವಿಜಯ್‌ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದಂತವೈದ್ಯರಾಗಿರುವ ಇವರು, ಕಾರೈಕುಡಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

ಕೆ.ಜಿ ಅರುಣರಾಜ್:

ಐಆರ್‌ಎಸ್ ವೃತ್ತಿಜೀವನ ತೊರೆದು ಟಿವಿಕೆ ಸೇರಿದ್ದ ವೈದ್ಯ ಅರುಣ್ ರಾಜ್, ತಮ್ಮ ತವರು ಕ್ಷೇತ್ರವಾದ ತಿರುಚೆಂಗೋಡ್‌ನಿಂದ ಗೆದ್ದಿದ್ದು, ವಿಜಯ್‌ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.

ಪಿ ವೆಂಕಟರಮಣನ್

ಚೆನ್ನೈನ ಮೈಲಾಪುರ ಶಾಸಕ ಪಿ.ವೆಂಕಟರಮಣನ್ ವಿಜಯ್‌ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ಬ್ರಾಹ್ಮಣ ಸಮುದಾಯದ ಪ್ರಭಾವವಿರುವ ಕ್ಷೇತ್ರದಲ್ಲಿ (ಮೈಲಾಪುರ) ಗೆದ್ದಿರುವ ಇವರನ್ನು ಸರ್ಕಾರದಲ್ಲಿ ಆ ಸಮುದಾಯದ ಪ್ರಮುಖ ಪ್ರತಿನಿಧಿಯಾಗಿ ಪರಿಗಣಿಸಲಾಗಿದೆ.

ಎಸ್.ಕೀರ್ತನಾ

ಕೀರ್ತನಾ ಅವರು ವಿಜಯ್ ಸಂಪುಟದ ಅತ್ಯಂತ ಕಿರಿಯ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ವಿರುಧುನಗರ ಜಿಲ್ಲೆಯಿಂದ ಗೆದ್ದಿದ್ದಾರೆ.

ಮೊದಲ ದ್ರಾವಿಡಯೇತರ ಸರ್ಕಾರ…

ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚನೆ ಸಂಬಂಧ ಕಳೆದ ಕೆಲ ದಿನಗಳಿಂದ ಎದ್ದಿದ್ದ ಕುತೂಹಲ ಹಾಗೂ ಅನಿಶ್ಚಿತತೆಗೆ ಕೊನೆಗೂ ತೆರೆ ಬಿದ್ದಿದೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ಜೋಸೆಫ್‌ ವಿಜಯ್‌ ಅವರು ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಪ್ರಮಾಣವಚನ ಬೋಧಿಸಿದ್ದಾರೆ.

ತಮಿಳುನಾಡಿನಲ್ಲಿ ಸಾಂಪ್ರದಾಯಿಕ ದ್ರಾವಿಡ ಪಕ್ಷಗಳಾದ ಎಐಎಡಿಎಂಕೆ ಮತ್ತು ಡಿಎಂಕೆಗಳ ವಾಡಿಕೆಗಳನ್ನು ಮುರಿದು ವಿಜಯ್ ಅವರ ಟಿವಿಕೆ ಪಕ್ಷವು ಸರ್ಕಾರ ರಚಿಸಿದೆ. ಅಲ್ಲದೇ ರಾಜ್ಯದಲ್ಲಿ ಅಧಿಕಾರಕ್ಕೇರಿದ ಮೊದಲ ದ್ರಾವಿಡಯೇತರ ಪಕ್ಷ ಎನಿಸಿದೆ.

ಆಧಾರ: ಎನ್‌ಡಿಟಿವಿ

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ: ದಾಖಲೆ ಬರೆದ ಟಿವಿಕೆ
Dailyhunt
Disclaimer: This content has not been generated, created or edited by Dailyhunt. Publisher: Prajavani