'ಗಡ್ಡಕ್ಕೆ ಬೆಂಕಿ ಬಿದ್ದಿದೆ, ಟೊಂಕ ಕಟ್ಟುವವರಿಲ್ಲ!' ಎಂಬ ಲೇಖನದಲ್ಲಿ (ಪ್ರ.ವಾ., ಏ. 28) ರವೀಂದ್ರ ಭಟ್ಟ ಅವರು, 'ನಮ್ಮ ಪ್ರಮುಖ ನಾಯಕರೊಬ್ಬರು ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಪಾಲ್ಗೊಂಡು, ಇಷ್ಟೊಂದು ಭಾರೀ ಸಂಖ್ಯೆಯಲ್ಲಿ ಜನ ಸೇರಿರುವುದನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ ಎಂದು ಖುಷಿಯಿಂದ ಹೇಳಿಕೊಂಡರು' ಎಂದು ಬರೆದಿದ್ದಾರೆ. ಆ ಹೇಳಿಕೆ ಓದಿ, ಅಯ್ಯೋ, ನಾಯಕರಾದವರು ಹೀಗೂ ಇರುತ್ತಾರೆಯೇ ಎಂದು ಅಚ್ಚರಿಯಾಯಿತು, ದುಃಖವಾಯಿತು. ಮಹಾಮಾರಿಯ ಈ ಕಾಲದಲ್ಲಿ ಹಾಗೆಂದವರು ಯಾರು ಎಂದು ಲೇಖನವು ತಿಳಿಸಿಲ್ಲ.
'ಗಡ್ಡಕ್ಕೆ ಬೆಂಕಿ ಬಿದ್ದಿದೆ, ಟೊಂಕ ಕಟ್ಟುವವರಿಲ್ಲ'
ಹಾಗೆಂದವರು ಬಿಜೆಪಿ ಪಕ್ಷದವರಾಗಿರಲಿಕ್ಕಿಲ್ಲ, ಅಲ್ಲವೇ? ಒಂದು ವೇಳೆ ಅವರು ಆ ಪಕ್ಷದವರಾಗಿದ್ದಿದ್ದರೆ, ದೇಶದ ಮುತ್ಸದ್ದಿ- ಕಾವಲುಗಾರರಾಗಿರುವ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಖಂಡಿತವಾಗಿಯೂ ಅವರಿಗೆ ಬಹಿರಂಗವಾಗಿ ಛೀಮಾರಿ ಹಾಕಿ ಶಿಕ್ಷಿಸುತ್ತಿದ್ದರು ಅಥವಾ ಹಾಗೆಂದವರು ಯಾವುದಾದರೂ ವಿರೋಧ ಪಕ್ಷದ ನಾಯಕರಾಗಿದ್ದಿದ್ದರೆ, ಮೋದಿಯವರು ಅವರ ಮೇಲೆ ದೇಶದ್ರೋಹದ ಮೊಕದ್ದಮೆಯನ್ನು ಹೊರಿಸುತ್ತಿದ್ದರು.
- ರಘುನಂದನ, ಬೆಂಗಳೂರು

