ನವದೆಹಲಿ: ಹೈದರಾಬಾದ್ನ ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಆಯಂಡ್ ರಿಸರ್ಚ್ ವಿಶ್ವವಿದ್ಯಾಲಯದಿಂದ (ಎನ್ಎಎಲ್ಎಸ್ಎಆರ್) ಪ್ರಸಕ್ತ ವರ್ಷ ಪದವಿ ಪೂರೈಸುವ ಯಾವುದೇ ವಿದ್ಯಾರ್ಥಿಯನ್ನು ವಕೀಲರಾಗಿ ನೋಂದಾಯಿಸಬಾರದು ಎಂದು ನಿರ್ದೇಶನ ನೀಡಿದ್ದ ಭಾರತೀಯ ವಕೀಲರ ಸಂಘದ(ಬಿಸಿಐ) ನಡೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಕಟುವಾಗಿ ಟೀಕಿಸಿದೆ.
'ವಿದ್ಯಾರ್ಥಿಗಳು ಪ್ರತಿಭಟಿಸುವ ಹಕ್ಕು ಹೊಂದಿದ್ದಾರೆ. ಅಲ್ಲದೇ, ಇದು ನನ್ನ ಮತ್ತು ವಿದ್ಯಾರ್ಥಿಗಳ ನಡುವಿನ ವಿಚಾರ ವಿನಿಮಯಕ್ಕೆ ಸಂಬಂಧಿಸಿದ ವಿಷಯ. ಹೀಗಾಗಿ ಬಿಸಿಐಗೂ ಈ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲ' ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ.
ಬಿಸಿಐ ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯ ವಿಚಾರಣೆಯನ್ನು ಸಿಜೆಐ ನೇತೃತ್ವದ ಪೀಠ ನಡೆಸಿತು. ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಹಾಗೂ ವಿ.ಮೋಹನಾ ಅವರು ಈ ಪೀಠದಲ್ಲಿದ್ದಾರೆ.
ಎನ್ಎಎಲ್ಎಸ್ಎಆರ್ ಘಟಿಕೋತ್ಸವದಲ್ಲಿ ಸಿಜೆಐ ಸೂರ್ಯಕಾಂತ್ ಅವರು ಪಾಲ್ಗೊಳ್ಳುವುದನ್ನು ವಿರೋಧಿಸಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚೆಗೆ ಅಭಿಯಾನ ನಡೆಸಿದ್ದರು. ಈ ಕಾರಣಕ್ಕೆ, ಎಲ್ಲ ರಾಜ್ಯಗಳ ವಕೀಲರ ಸಂಘಗಳಿಗೆ ಗುರುವಾರ ಸುತ್ತೋಲೆಯೊಂದನ್ನು ಕಳುಹಿಸಿದ್ದ ಬಿಸಿಐ, ಈ ವಿ.ವಿಯಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳನ್ನು ವಕೀಲರಾಗಿ ನೋಂದಣಿ ಮಾಡಿಸಿಕೊಳ್ಳದಂತೆ ಸೂಚಿಸಿತ್ತು.
ವಿಚಾರಣೆ ವೇಳೆ, 'ಇದು ನನ್ನ ಮತ್ತು ವಿದ್ಯಾರ್ಥಿಗಳಿಗೆ ನಡುವಿನ ವಿಚಾರ. ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಕ್ಕೆ ಅವರು (ಬಿಸಿಐ) ಯಾರು' ಎಂದು ಸಿಜೆಐ ಸೂರ್ಯ ಕಾಂತ್ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಸಿಐ ಪರ ವಕೀಲರು, ಸಂಘವು ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆಯಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಆಗ,'ಬಿಸಿಐ ಅಥವಾ ಇತರ ಯಾವುದೇ ರಾಜ್ಯದ ವಕೀಲರ ಸಂಘದ ಸೂಚನೆ ಮೇರೆಗೆ ಈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಥವಾ ಬೋಧಕರ ವಿರುದ್ಧ ಯಾವುದೇ ದಂಡನೀಯ ಕ್ರಮ ಕೈಗೊಳ್ಳಬಾರದು' ಎಂದು ಪೀಠ ನಿರ್ದೇಶನ ನೀಡಿತು.
ಸುತ್ತೋಲೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಬಿಸಿಐಗೆ ನೋಟಿಸ್ ನೀಡಿದ ಪೀಠ, ಎರಡು ವಾರ ಬಳಿಕ ವಿಚಾರಣೆ ಮುಂದುವರಿಸುವುದಾಗಿ ಹೇಳಿತು.
ಸಿಜೆಐಗೆ ಆಹ್ವಾನ: ಎಸ್ವಿಯು ವಿದ್ಯಾರ್ಥಿಗಳ ಮನವಿ
ಹೈದರಾಬಾದ್: ವಿಶ್ವವಿದ್ಯಾಲಯ ಘಟಿಕೋತ್ಸವಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನು ಆಹ್ವಾನಿಸಿದ್ದನ್ನು ಇಲ್ಲಿನ ಎನ್ಎಎಲ್ಎಸ್ಎಆರ್ ವಿದ್ಯಾರ್ಥಿಗಳು ವಿರೋಧಿಸಿದ್ದ ವಿಚಾರ ದೇಶದ ಗಮನ ಸೆಳೆದಿತ್ತು. ಆದರೆ ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ(ಎಸ್ವಿಯು) ವಿದ್ಯಾರ್ಥಿಗಳು ಸಂಶೋಧನಾ ಅಭ್ಯರ್ಥಿಗಳು ಹಾಗೂ ಮಾಜಿ ವಿದ್ಯಾರ್ಥಿಗಳು ವಿ.ವಿಯಲ್ಲಿ ಆಯೋಜಿಸಿರುವ ಸಂವಾದ ಕಾರ್ಯಕ್ರಮಕ್ಕೆ ಸಿಜೆಐ ಸೂರ್ಯ ಕಾಂತ್ ಅವರನ್ನು ಆಹ್ವಾನಿಸುವಂತೆ ಕೋರಿದ್ದಾರೆ. ಎಸ್ವಿಯು ವಿದ್ಯಾರ್ಥಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳು ಈ ಸಂಬಂಧ ಕುಲಪತಿ ಪ್ರೊ.ಟಿ.ನರಸಿಂಗ ರಾವ್ ಅವರಿಗೆ ಶುಕ್ರವಾರ ಮನವಿಪತ್ರ ಸಲ್ಲಿಸಿದ್ದಾರೆ. 'ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ ಸಾಂವಿಧಾನಿಕ ಸಂವಾದ-2026' ಎಂಬ ಕಾರ್ಯಕ್ರಮ ಆಯೋಜಿಸಲಾಗಿದ್ದು 'ಸಾಂವಿಧಾನಿಕ ಪ್ರಜಾಪ್ರಭುತ್ವ ಭಿನ್ನಾಭಿಪ್ರಾಯ ನ್ಯಾಯಾಂಗದ ಸ್ವಾತಂತ್ರ್ಯ ಹಾಗೂ ಯುವ ವಕೀಲರ ಪಾತ್ರ' ಎಂಬುದು ಸಂವಾದದ ವಿಷಯವಾಗಿದೆ.

