ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ವಿಜಯ್ ಸರ್ಕಾರ ರಚಿಸಲಿ, 6 ತಿಂಗಳು ತೊಂದರೆ ಕೊಡುವುದಿಲ್ಲ ಎಂದು ನಿರ್ಗಮಿತ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಹೊಸ ಸರ್ಕಾರ ರಚನೆಗೆ ಕಸರತ್ತು ನಡೆಯುತ್ತಿರುವ ಮಧ್ಯೆ ಎಂ.ಕೆ. ಸ್ಟಾಲಿನ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, 'ವಿಜಯ್ ನೇತೃತ್ವದ ಹೊಸ ಸರ್ಕಾರಕ್ಕೆ ನಾವು ಆರು ತಿಂಗಳ ಕಾಲ ಯಾವುದೇ ತೊಂದರೆ ನೀಡದೆ, ಅವರ ಆಡಳಿತವನ್ನು ಗಮನಿಸುತ್ತೇವೆ' ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಇನ್ನು, ತಮ್ಮ ಯೋಜನೆಗಳ ಮುಂದುವರಿಕೆಗೆ ಆಗ್ರಹಿಸಿದ ಸ್ಟಾಲಿನ್, ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವುದು ಅಥವಾ ತಕ್ಷಣಕ್ಕೆ ಮತ್ತೊಂದು ಚುನಾವಣೆ ಎದುರಾಗುವುದು ನಮಗೆ ಇಷ್ಟವಿಲ್ಲ. ನಮ್ಮ ಸರ್ಕಾರ ಜಾರಿಗೆ ತಂದಿರುವ ಶಾಲಾ ಮಕ್ಕಳ ಉಚಿತ ಉಪಹಾರ ಯೋಜನೆ ಮತ್ತು ಕಲೈಜ್ಞರ್ ಮಹಿಳಾ ಹಕ್ಕು ಮೊತ್ತ ಯೋಜನೆಗಳನ್ನು ಹೊಸ ಸರ್ಕಾರ ಮುಂದುವರಿಸಬೇಕು ಎಂದು ನಾನು ನಿರೀಕ್ಷಿಸುತ್ತೇನೆ' ಎಂದು ತಿಳಿಸಿದರು.
ಮಹಿಳೆಯರಿಗೆ ₹2,500 ನೀಡುವುದಾಗಿ ವಿಜಯ್ ನೀಡಿರುವ ಭರವಸೆಯ ಬಗ್ಗೆ ಪ್ರತಿಕ್ರಿಯಿಸಿದ ಸ್ಟಾಲಿನ್, 'ಇದು ಈಡೇರಿಸಲು ಕಷ್ಟಕರವಾದ ಭರವಸೆ. ಕನಿಷ್ಠ ನಾವು ನೀಡುತ್ತಿದ್ದಂತೆ ₹1,000ನ್ನಾದರೂ ಅವರು ನೀಡಲಿ. ಅಲ್ಲದೆ, ಪಡಿತರ ಚೀಟಿದಾರರಿಗೆ ವರ್ಷಕ್ಕೆ 6 ಉಚಿತ ಸಿಲಿಂಡರ್ ನೀಡುವ ಟಿವಿಕೆ ಭರವಸೆ ಈಡೇರಿಸುವುದು ಅಸಾಧ್ಯ. ಒಂದು ವೇಳೆ ಅವರು ಉಚಿತ ಸಿಲಿಂಡರ್ ನೀಡಿದರೆ ನಮಗೆ ಸಂತೋಷ ಎಂದರು.

