ನವದೆಹಲಿ (ಪಿಟಿಐ): ವಾಟ್ಸ್ಆಯಪ್ನ 'ಯೂಸರ್ನೇಮ್' ಸೌಲಭ್ಯ ಬಳಸಿ ಇನ್ನೊಬ್ಬರ ಹೆಸರಿನಲ್ಲಿ ಸಂದೇಶ ರವಾನಿಸುವ ಮತ್ತು ಸೈಬರ್ ಅಪರಾಧಗಳನ್ನು ಎಸಗುವ ಗಂಭೀರ ಸಾಧ್ಯತೆ ಇರುವ ಕಾರಣದಿಂದಾಗಿ ಕೇಂದ್ರ ಸರ್ಕಾರವು ಆ ಕಂಪನಿಯಿಂದ ವಿವರಣೆ ಕೇಳಿದೆ ಎಂದು ಮಾಹಿತಿ ತಂತ್ರಜ್ಞಾನ (ಐ.ಟಿ.) ಕಾರ್ಯದರ್ಶಿ ಎಸ್.
ಕೃಷ್ಣನ್ ಹೇಳಿದ್ದಾರೆ.
ಯೂಸರ್ನೇಮ್ ಸೌಲಭ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳಿ ಕೇಂದ್ರ ಸರ್ಕಾರವು ವಾಟ್ಸ್ಆಯಪ್, ಟೆಲಿಗ್ರಾಂ ಮತ್ತು ಸಿಗ್ನಲ್ ಕಂಪನಿಗಳಿಗೆ ಈ ವಾರ ನೋಟಿಸ್ ಕಳುಹಿಸಿದೆ. ಈ ಸೌಲಭ್ಯವು ಬಳಕೆದಾರರಿಗೆ ತಮ್ಮ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಬಹಿರಂಗಪಡಿಸದೆಯೇ ಇನ್ನೊಬ್ಬರಿಗೆ ಸಂದೇಶ ರವಾನಿಸಲು ಅವಕಾಶ ನೀಡುತ್ತದೆ.
ಯೂಸರ್ನೇಮ್ ಸೌಲಭ್ಯವನ್ನು ನೀಡುವುದಾಗಿ ವಾಟ್ಸ್ಆಯಪ್ ಪ್ರಕಟಿಸಿದ ಕೆಲವೇ ದಿನಗಳಲ್ಲಿ ಕೇಂದ್ರವು ಅದಕ್ಕೆ ನೋಟಿಸ್ ಜಾರಿಗೊಳಿಸಿದೆ. ಈ ಸೌಲಭ್ಯದ ಬಗ್ಗೆ ಪೂರ್ಣ ವಿವರ ನೀಡಬೇಕು, ತನಗೆ ತೃಪ್ತಿಯಾಗುವ ಬಗೆಯಲ್ಲಿ ಸಮಾಲೋಚನೆ ಪೂರ್ಣಗೊಳ್ಳುವವರೆಗೆ ಈ ಸೌಲಭ್ಯವನ್ನು ಜಾರಿಗೆ ತರಬಾರದು ಎಂದು ಕೇಂದ್ರವು ಸೂಚನೆ ನೀಡಿದೆ.
ಟೆಲಿಗ್ರಾಂ ಹಾಗೂ ಸಿಗ್ನಲ್ ಆಯಪ್ಗಳಲ್ಲಿ ಈ ಸೌಲಭ್ಯವು ಈಗಾಗಲೇ ಲಭ್ಯವಿದೆ. ಈ ಎರಡು ಕಂಪನಿಗಳಿಗೆ ಕೂಡ ಕೇಂದ್ರ ನೋಟಿಸ್ ನೀಡಿದೆ. ವಾಟ್ಸ್ಆಯಪ್ ಕಂಪನಿಯು ಭಾರತದಲ್ಲಿ 50 ಕೋಟಿ ಬಳಕೆದಾರರನ್ನು ಹೊಂದಿದೆ. ಟೆಲಿಗ್ರಾಂ ಕಂಪನಿಯ ಗ್ರಾಹಕರ ಸಂಖ್ಯೆ ಬಹಳ ಕಡಿಮೆ ಇದೆ.
'ಸೈಬರ್ ಅಪರಾಧಗಳನ್ನು ಎಸಗುವ ಬಗೆಗೆ ಯೂಸರ್ನೇಮ್ ಸೌಲಭ್ಯವು ಇನ್ನೊಂದು ಆಯಾಮವಿದ್ದಂತೆ' ಎಂದು ಕೃಷ್ಣನ್ ಅವರು ಸಿಐಐ ಸೈಬರ್ ಭದ್ರತಾ ಶೃಂಗದಲ್ಲಿ ಪಾಲ್ಗೊಂಡ ವೇಳೆ ಹೇಳಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-51-2130982075

