Dailyhunt Logo
  • Light mode
    Follow system
    Dark mode
    • Play Story
    • App Story

ಕೇಸರಿ Vs ನೀಲಿ..! ಹಾಕಿ ಇಂಡಿಯಾದಲ್ಲಿ ʼಬಣ್ಣದʼ ರಾಜಕೀಯ..!

Pratidhvani 3 weeks ago

ಕೇಸರಿ ಬಣ್ಣ – ಧೈರ್ಯ, ತ್ಯಾಗ, ಶಕ್ತಿ ಮತ್ತು ಸೇವಾಭಾವದ ಪ್ರತೀಕ.. ನೀಲಿ ಬಣ್ಣ – ಶಾಂತಿ, ವಿಶ್ವಾಸ, ಜ್ಞಾನ ಮತ್ತು ಸ್ಥಿರತೆಯ ಸಂಕೇತ…ಈಗ ಹೇಳಿ.. ಯಾವ ಬಣ್ಣ ಗ್ರೇಟ್.? ಯಾವ ಬಣ್ಣ ಬೆಸ್ಟ್..?

ಅಷ್ಟಕ್ಕೂ ಈ ಬಣ್ಣ – ಬಣ್ಣಗಳ ನಡುವೆ ಸ್ಪರ್ಧೆ ಯಾಕೆ..? ಆ ಬಣ್ಣ, ಈ ಬಣ್ಣ ಎಂದು ವಿರೋಧವೇಕೆ…?

ಬಣ್ಣ ಯಾವುದೇ ಇರಲಿ.. ನಾವೆಲ್ಲರೂ ಒಂದೇ ಅನ್ನುವಾಗ, ಈ ಬಣ್ಣಗಳಿಗಾಗಿ ಗುದ್ದಾಡುವುದು ಯಾಕೆ..? ಬಣ್ಣಗಳಲ್ಲಿ ರಾಜಕೀಯ ಬೆಸೆಯುವುದು ಯಾಕೆ..? ಯಾವ ಬಣ್ಣದ ಉಡುಪುಗಳನ್ನು ಧರಿಸಬೇಕು ಅನ್ನೋದು ಅವರವರ ಇಚ್ಛೆ. ಅವರ ಸ್ವಾತಂತ್ರ್ಯ. ಅದನ್ನು ವಿರೋಧಿಸುವ ಹಕ್ಕು ಯಾರಿಗೂ ಇಲ್ಲ. ಅಂದ ಮೇಲೆ ಈ ಬಣ್ಣಗಳ ನಡುವಿನ ಕೆಸರೆರೆಚಾಟ ಬೇಕಾ..?

ನಮ್ಮಲ್ಲೊಂದು ಲೆಕ್ಕಾಚಾರವಿದೆ. ಒಂದೊಂದು ಬಣ್ಣ, ಒಂದೊಂದು ಜಾತಿ, ಸಮುದಾಯ, ಸಂಘ, ಸಂಘಟನೆಗಳಿಗೆ ಪೇಟೆಂಟ್ ಆಗಿದೆ. ಹಾಗಾಗಿಯೇ ಇವತ್ತು ಬಣ್ಣ ಬಣ್ಣಗಳ ನಡುವೆ ರಾಜಕೀಯ, ಜಾತಿ, ಧರ್ಮಗಳ ನಡುವಿನ ಸಂಘರ್ಷ ನಡೆಯುತ್ತಿದೆ.

ಇದೀಗ ಕೇಸರಿ ವರ್ಸಸ್ ನೀಲಿ ಬಣ್ಣದ ನಡುವೆ ಜಟಾಪಟಿ ಶುರುವಾಗಿದೆ. ಹಾಗಂತ ಜೆರ್ಸಿಯ ಬಣ್ಣ ರಾಜಕೀಯವಾಗುತ್ತಿರುವುದು ಇದೇನೂ ಮೊದಲಲ್ಲ. ಭಾರತದ ತ್ರಿವರ್ಣ ಧ್ವಜದಲ್ಲೂ ಕೇಸರಿ, ಬಿಳಿ, ಹಸಿರು ಬಣ್ಣಗಳ ನಡುವೆ ಅಶೋಕ ಚಕ್ರದಲ್ಲಿರುವ ನೀಲಿ ಬಣ್ಣವೂ ಸೇರಿಕೊಂಡಿದೆ. ಒಂದೊಂದು ಬಣ್ಣಕ್ಕೂ ಒಂದೊಂದು ಸಂಕೇತಗಳಿವೆ. ಆದ್ರೂ ಈ ಬಣ್ಣಗಳಲ್ಲಿ ಯಾಕೆ ಕಿತ್ತಾಟ ಅನ್ನೋದೇ ಅರ್ಥವಾಗುತ್ತಿಲ್ಲ.

ವಿವಾದದ ಕೇಂದ್ರ ಬಿಂದುವಾಗಿರುವ ಭಾರತದ ಹಾಕಿ ತಂಡದ ಜೆರ್ಸಿ..!

ಮುಂಬರುವ ಹಾಕಿ ವಿಶ್ವಕಪ್‍ನಲ್ಲಿ ಭಾರತದ ಹಾಕಿ ಆಟಗಾರರ ಜೆರ್ಸಿಯ ಬಣ್ಣ ವಿವಾದದ ಕಿಡಿಯಾಗಿದೆ. ಕಾರಣ ಇಷ್ಟೇ.. ಇಷ್ಟು ದಿನ ಭಾರತದ ಹಾಕಿ ಆಟಗಾರರು ನೀಲಿ ಬಣ್ಣದ ಜೆರ್ಸಿ ಧರಿಸಿಕೊಂಡು ಆಡುತ್ತಿದ್ದರು. ಇದೀಗ ಹಾಕಿ ವಿಶ್ವಕಪ್‍ನಲ್ಲಿ ಭಾರತದ ಆಟಗಾರರು ಕೇಸರಿ ಬಣ್ಣದ ಜೆರ್ಸಿಯಲ್ಲಿ ಆಡಲಿದ್ದಾರೆ. ಈಗಾಗಲೇ ಹಾಕಿ ಇಂಡಿಯಾ ಆಟಗಾರರ ಜೆರ್ಸಿಯನ್ನು ಅನಾವರಣಗೊಳಿಸಿದೆ.

ಭಾರತ ಹಾಕಿ ತಂಡದ ಜೆರ್ಸಿ ಅನಾವರಣಗೊಳ್ಳುತ್ತಿದ್ದಂತೆ, ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕಣ್ಣು ಕೆಂಪಾಗಿದೆ ಜೊತೆಗೆ ಕೆಲವು ಮಾಜಿ ಆಟಗಾರರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ.

ಕೇಸರಿ ಬಣ್ಣದ ಜೆರ್ಸಿಯ ಹಿಂದಿರುವ ಮಹತ್ವವನ್ನು ಹಾಕಿ ಇಂಡಿಯಾ ಸಮರ್ಥಿಸಿಕೊಂಡಿದೆ. ಕಾಲಕ್ಕೆ ತಕ್ಕಂತೆ ಜೆರ್ಸಿ ಬದಲಾವಣೆ ಮಾಡಿದ್ದೇವೆ. ಇದು ದೊಡ್ಡ ವಿಷ್ಯವೇನು ಅಲ್ಲ. ಕೇಸರಿ ಬಣ್ಣ ಧೈರ್ಯ, ತ್ಯಾಗ ಮತ್ತು ಗೆಲುವನ್ನು ಬಿಂಬಿಸುತ್ತದೆ. ಭಾರತದ ತ್ರಿವರ್ಣ ಧ್ವಜದಲ್ಲಿ ಕೇಸರಿ ಬಣ್ಣವಿದೆ. ಇದು ಸೂರ್ಯೋದಯದಂತೆ ಹೊಸ ಆರಂಭವನ್ನು ಪ್ರತಿಬಿಂಬಿಸುತ್ತಿದೆ ಎಂಬುದು ಹಾಕಿ ಇಂಡಿಯಾದ ವಾದವಾಗಿದೆ.

ಹಾಕಿ ಇಂಡಿಯಾ ಜೆರ್ಸಿ ಬದಲಾವಣೆಗೆ ಕಾರಣ ಏನು..?

ಜೆರ್ಸಿ ಬಣ್ಣ ಬದಲಾವಣೆಯ ಬಗ್ಗೆ ಹಾಕಿ ಇಂಡಿಯಾ ತಾಂತ್ರಿಕ ಕಾರಣವನ್ನು ನೀಡಿದೆ. ಅಂತಾರಾಷ್ಟ್ರೀಯ ಪಂದ್ಯಗಳು ನೀಲಿ ಬಣ್ಣದ ಕೃತಕ ಟರ್ಫ್‍ನಲ್ಲಿ ನಡೆಯುತ್ತದೆ. ಹೀಗಾಗಿ ನೀಲಿ ಬಣ್ಣದ ಜೆರ್ಸಿಯಲ್ಲಿ ಆಡುವಾಗ ಆಟಗಾರರಿಗೆ ಸ್ಪಷ್ಟತೆಯ ಮೇಲೆ ಪರಿಣಾಮ ಬೀರುತ್ತಿತ್ತು. ಇದರಿಂದ ಜೆರ್ಸಿಯ ಬಣ್ಣವನ್ನು ಬದಲಾವಣೆ ಮಾಡಿದ್ದೇವೆ. ಈ ಹಿಂದೆಯೂ ಸಾಕಷ್ಟು ಬಾರಿ ಜೆರ್ಸಿ ಬಣ್ಣವನ್ನು ಬದಲಾಯಿಸಿದ್ದೇವೆ ಎಂದು ಹಾಕಿ ಇಂಡಿಯಾ ಸ್ಪಷ್ಟನೆ ನೀಡಿದೆ.

ಆದ್ರೆ ಒಡಿಶಾದ ಮಾಜಿ ಸಿಎಂ ನವೀನ್ ಪಟ್ನಾಯಕ್ ಹಾಕಿ ಇಂಡಿಯಾದ ವಾದವನ್ನು ಒಪ್ಪಿಕೊಳ್ಳಲು ರೆಡಿ ಇಲ್ಲ. ಅಷ್ಟೇ ಅಲ್ಲ, ಹಾಕಿ ಇಂಡಿಯಾದ ಈ ಸಮರ್ಥನೆಗೆ ನವೀನ್ ಪಟ್ನಾಯಕ್, ರಾಜಕೀಯ ಬಣ್ಣ ಬಳಿದಿದ್ದಾರೆ. ಇದೆಲ್ಲಾ ಒಡಿಸ್ಸಾ ಬಿಜೆಪಿ ಸರ್ಕಾರದ ಕಿತಾಪತಿ ಎಂದು ಆರೋಪಿಸಿದ್ದಾರೆ.

ಭಾರತ ಹಾಕಿ ತಂಡದ ನೀಲಿ ಬಣ್ಣದ ಹಿಂದಿನ ಜೆರ್ಸಿಯೂ ಬರೀ ಬಣ್ಣವಲ್ಲ. ದೇಶದ ಕ್ರೀಡಾಪರಂಪರೆಯೊಂದಿಗೆ ಬೆಸೆದಿರುವ ಬಣ್ಣ. ಗೆಲುವು – ಸೋಲಿನ ನಡುವೆಯೂ ತಂಡವನ್ನು ಒಗ್ಗಡಿಸಿರುವ ಬಣ್ಣ. ಇದೇ ಜೆರ್ಸಿಯಲ್ಲಿ ಭಾರತದ ಹಾಕಿ ಆಟಗಾರರು ಅಪ್ರತಿಮ ಸಾಧನೆ ಮಾಡಿದ್ದಾರೆ. ಒಲಿಂಪಿಕ್ಸ್‍ನಲ್ಲಿ ಚಿನ್ನದ ಪದಕ ಗೆದ್ದು ಭಾರತದ ರಾಷ್ಟ್ರ ಗೀತೆ ಮೊಳಗುವಾಗ ಆಟಗಾರರು ಇದೇ ನೀಲಿ ಬಣ್ಣದಿಂದ ಕಂಗೊಳಿಸುತ್ತಿದ್ದರು ಎಂದು ಹೇಳಿದ್ದಾರೆ.

ಭಾರತೀಯ ಹಾಕಿಗೆ ಒಡಿಸ್ಸಾ ಸರ್ಕಾರ ನೀಡಿರುವ ಕೊಡುಗೆ ಅಪಾರ. ಸ್ವತಃ ಗೋಲು ಕೀಪರ್ ಆಗಿದ್ದ ನವೀನ್ ಪಟ್ನಾಯಕ್ ಅವರು ತಮ್ಮ ಅವಧಿಯಲ್ಲಿ ಭಾರತೀಯ ಹಾಕಿಗೆ ಬೆನ್ನುಲುಬಾಗಿ ನಿಂತಿದ್ರು. ತಂಡಕ್ಕೆ ಯಾರು ಪ್ರಾಯೋಜಕತ್ವ ನೀಡಲು ಹಿಂದೇಟು ಹಾಕಿದ್ದಾಗ ಒಡಿಶಾ ಸರ್ಕಾರವೇ ಪ್ರಾಯೋಜಕತ್ವವನ್ನು ನೀಡಿತ್ತು. ಅಲ್ಲದೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಹಾಕಿ ಟೂರ್ನಿಗಳನ್ನು ಸಹ ಆಯೋಜನೆ ಮಾಡಿದೆ. ಇದನ್ನು ಮರೆಯುವ ಹಾಗಿಲ್ಲ.

ಆದ್ರೂ ಈಗ ನವೀನ್ ಪಟ್ನಾಯಕ್ ಜೆರ್ಸಿ ಬಣ್ಣದ ವಿಷ್ಯದಲ್ಲಿ ಸಿಟ್ಟು ಮಾಡಿಕೊಂಡಿದ್ದಾರೆ. ಒಡಿಶಾ ಸರ್ಕಾರದ ತಾಳಕ್ಕೆ ಕುಣಿಯುತ್ತಿರುವ ಹಾಕಿ ಇಂಡಿಯಾ ವಿರುದ್ಧ ಆಕ್ರೋಶವನ್ನೇ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಕ್ರೀಡೆಯಾಗಿರುವ ಹಾಕಿ ಆಟದಲ್ಲಿ ಬಣ್ಣದ ರಾಜಕೀಯ ನಡೆಯುತ್ತಿರುವುದು ಅಂತೂ ಒಳ್ಳೆಯ ಬೆಳವಣಿಗೆಯಲ್ಲ.

ಹಾಗಂತ ಭಾರತ ಬಿಡಿ, ವಿಶ್ವದಲ್ಲಿ ಕೇಸರಿ ಬಣ್ಣದ ಜೆರ್ಸಿ ಆಡುವ ತಂಡಗಳು ಇಲ್ಲವೇ ಇಲ್ವಾ..? ಭಾರತದಲ್ಲಿ ಕೇಸರಿ ಬಣ್ಣ ಒಂದು ಸಮುದಾಯಕ್ಕೆ, ಒಂದು ಸಂಘಟನೆಗೆ ಮಾತ್ರ ಸೀಮಿತವಾಗಿದೆಯಾ..? ಖಂಡಿತ ಇಲ್ಲ. ಟೀಮ್ ಇಂಡಿಯಾÀ ಕ್ರಿಕೆಟ್ ಜೆರ್ಸಿಯಲ್ಲೂ ಕೇಸರಿ ಬಣ್ಣ ಇದೆ. ಅಷ್ಟೇ ಯಾಕೆ, ಸ್ಥಳೀಯ ಕ್ರೀಡಾಕೂಟಗಳಲ್ಲೂ ಕೇಸರಿ ಬಣ್ಣದ ಜೆರ್ಸಿಗಳನ್ನು ಧರಿಸಿಕೊಂಡು ಕೀಡಾಪಟುಗಳು ಆಡುತ್ತಾರೆ. ಅಂದ ಮೇಲೆ ಕೇಸರಿ ಬಣ್ಣದ ಮೇಲೆ ವಿರೋಧ ಯಾಕೆ..?

ಇನ್ನು ಹೊಸ ಜೆರ್ಸಿಯನ್ನು ಭಾರತದ ಪರಂಪರೆ ಮತ್ತು ಗುರುತನ್ನು ಪ್ರತಿಬಿಂಬಿಸುವಂತೆ ವಿನ್ಯಾಸಗೊಳಿಸಲಾಗಿದೆ. ಭಾರತದ ರಾಷ್ಟ್ರ ಧ್ವಜದ ಭಾಗವಾಗಿರುವ ಕೇಸರಿ ಬಣ್ಣ, ಅಶೋಕ ಚಕ್ರದಲ್ಲಿರುವ ನೀಲಿ ಬಣ್ಣ, ಎದೆಯ ಮೇಲೆ ಕಾಣಿಸುವ ಸುದರ್ಶನ ಚಕ್ರದ ಚಿತ್ರ, ಭುಜಗಳ ಮೇಲೆ ಭಾರತದ ರಾಷ್ಟ್ರೀಯ ಧ್ವಜ, ದೇವನಾಗರಿ ಲಿಪಿಯಲ್ಲಿ ಬರೆದಿರುವ ಭಾರತ ಪದ ಹೀಗೆ ಹಲವು ವಿಶೇಷತೆಗಳೊಂದಿಗೆ ಹಾಕಿ ಇಂಡಿಯಾ ಈ ಜೆರ್ಸಿಯನ್ನು ವಿನ್ಯಾಸಗೊಳಿಸಿದೆ.

ಒಂದಂತೂ ಸತ್ಯ.. ಕ್ರೀಡೆ ಅಂದ್ರೆ ಜಾತಿ, ಧರ್ಮಗಳನ್ನು ಎಲ್ಲೆಯನ್ನೂ ದಾಟಿ ದೇಶವನ್ನು ಒಗ್ಗೂಡಿಸುವ ಶಕ್ತಿ. ಇಲ್ಲಿ ಆಟಗಾರರ ಪ್ರತಿಭೆ, ಸಾಮಥ್ರ್ಯ ಮುಖ್ಯ. ಅದರ ಬದಲು ಅವರು ಧರಿಸಿರುವ ಜೆರ್ಸಿ ಅಲ್ಲ. ಜೆರ್ಸಿ ಅನ್ನೋದು ತಂಡದ ಒಂದು ಸಂಕೇತ ಅಷ್ಟೇ. ಹೀಗಾಗಿ ಬಣ್ಣ ಯಾವುದಾದ್ರೂ ಏನು..? ಚೆನ್ನಾಗಿ ಆಡಿ, ಟ್ರೋಫಿ ಗೆದ್ರೆ ಸಾಕು. ಬಣ್ಣ ಕಟ್ಟಿಕೊಂಡು ನಮಗೆ ಏನು ಆಗಬೇಕು. ಸುಮ್ಮನೆ ಬಣ್ಣದ ರಾಜಕೀಯ ಬೇಕಾ..? ನಿಮ್ಮ ಅಭಿಪ್ರಾಯ ಏನು..?

ವಿಶೇಷ ವರದಿ-ಸನತ್ ರೈ

Dailyhunt
Disclaimer: This content has not been generated, created or edited by Dailyhunt. Publisher: Pratidhvani