ಉಡುಪಿ: ಕೃಷ್ಣನನಾಡು ಉಡುಪಿ ಜಿಲ್ಲೆಯಲ್ಲಿ ಮೇಘಸ್ಫೋಟಕ್ಕೆ ಅಕ್ಷರಶಃ ಜಲಪ್ರಳಯವೇ ಸೃಷ್ಟಿಯಾಗಿದೆ.
ಮುಂದಿನ ಎರಡು ದಿನ ಪ್ರವಾಹದ ವಾತಾವರಣ ಇರಲಿದ್ದು, ರೆಡ್ ಅಲರ್ಟ್ ಘೋಷಣೆ ಆಗಿದೆ. ಹೀಗಾಗಿ ನದಿ ಪಾತ್ರದ ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ಕುದ್ರು ಪ್ರದೇಶದ ಜನ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮನವಿ ಮಾಡಿದ್ದಾರೆ.
ರಾತ್ರಿ ವೇಳೆ ಮನೆಗಳು ಮುಳುಗಡೆಯಾದರೆ ರಕ್ಷಣಾಕಾರ್ಯ ಕಷ್ಟವಾಗುತ್ತದೆ. ಹೀಗಾಗಿ ಜಿಲ್ಲಾಡಳಿತದ ಜೊತೆ ಜನ ಕೈಜೋಡಿಸಬೇಕು. ಕಳೆದ 24 ಗಂಟೆಯಲ್ಲಿ 700 ಮನೆಗಳು ಮುಳುಗಿವೆ. ಜಿಲ್ಲೆಯಲ್ಲಿ ಸುಮಾರು 3500 ಜನರ ರಕ್ಷಣೆ ಮಾಡಲಾಗಿದೆ. ಸಾರ್ವಜನಿಕರು, ಜನಪ್ರತಿನಿಧಿಗಳು ಸಾವಿರಾರು ಜನರ ರಕ್ಷಣೆ ಮಾಡಿದ್ದಾರೆ. ತಗ್ಗು ಪ್ರದೇಶದಲ್ಲಿದ್ದ ಜನ ಸುರಕ್ಷಿತ ತಾಣಗಳಿಗೆ ಶೀಘ್ರ ಬನ್ನಿ ಎಂದು ಡಿಸಿ ಜಗದೀಶ್ ಹೇಳಿದ್ದಾರೆ.
ಎಣ್ಣೆಹೊಳೆ ನದಿಯಲ್ಲಿ ಭಾರಿ ಪ್ರವಾಹ
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದಲ್ಲಿರುವ ಎಣ್ಣೆಹೊಳೆಯಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ನದಿ ದಡದಲ್ಲಿರುವ ಎಣ್ಣೆಹೊಳೆ ಪೇಟೆ ಜಲಾವೃತಗೊಂಡಿದೆ.
ಎಣ್ಣೆಹೊಳೆಯಲ್ಲಿ ಪ್ರವಾಹದ ಅಬ್ಬರಕ್ಕೆ ನೂರಾರು ಎಕರೆ ಕೃಷಿ ಭೂಮಿ ನೀರುಪಾಲಾಗಿದೆ. ಕಾರ್ಕಳ ಭಾಗದಲ್ಲಿ ವ್ಯಾಪಕವಾಗಿ ಬೆಳೆಯುವ ಭತ್ತದ ಕೃಷಿಗೆ ಅಪಾರ ಪ್ರಮಾಣದ ಹಾನಿಯಾಗಿದೆ.

