ಉಡುಪಿ ಕ್ಷೀಣಿಸಿದ ಮಳೆರಾಯನ ಅರ್ಭಟ - ಮನೆಗಳಿಗೆ ಹಿಂತಿರುಗುತ್ತಿರುವ ಜನರು
ಉಡುಪಿ, ಸೆಪ್ಟೆಂಬರ್21: ಉಡುಪಿ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆ ಇಂದು ಕ್ಷೀಣಿಸಿದೆ. ನಿನ್ನೆ ರಾತ್ರಿಯಿಂದಲೇ ಮಳೆಯ ಆರ್ಭಟ ಕಡಿಮೆ ಆಗಿದ್ದು, ಮಳೆರಾಯ ಬಿಡುವು ಪಡೆದು ಕೊಂಡಿದ್ದಾನೆ.
ಕಳೆದೆರಡು ದಿನಗಳಿಂದ ಬಿಡುವಿಲ್ಲದೆ ಸುರಿದ ಮಳೆಯ ಪರಿಣಾಮ ಉಡುಪಿ, ಬ್ರಹ್ಮಾವರ ಹಾಗೂ ಕಾಪು ತಾಲ್ಲೂಕಿನ ಬಹುತೇಕ ಗ್ರಾಮಗಳು ಜಲಾವೃತವಾಗಿದ್ದವು. ಮನೆಗಳಿಂದ ಜನರು ಹೊರಗೆ ಬರಲಾಗದೆ ಜಲದಿಗ್ಬಂಧನದಲ್ಲಿ ಸಿಲುಕಿದ್ದರು. ಉಡುಪಿಯ ಕೃಷ್ಣಮಠ ಹಾಗೂ ಹಿರಿಯಡ್ಕ ಸಮೀಪದ ಪುತ್ತಿಗೆ ಮಠ ಜಲಾವೃತಗೊಂಡಿತ್ತು. ಎನ್ಡಿಆರ್ಎಫ್ ತಂಡ ಅಗ್ನಿಶಾಮಕ ದಳದ ಸಿಬ್ಬಂದಿ, ಕೋಸ್ಟ್ಗಾರ್ಡ್ ಹಾಗೂ ಸ್ಥಳೀಯರು ದೋಣಿಗಳನ್ನು ಬಳಸಿ ಪ್ರವಾಹಕ್ಕೆ ಸಿಲುಕಿದವರನ್ನು ರಕ್ಷಣೆ ಮಾಡಿದರು.

