- ಮಹಿಳಾ ಅಧಿಕಾರಿಯ ವಿರುದ್ಧ ಮೊಕದ್ದಮೆ ದಾಖಲು
- ಮಗಳು ಕೊಲೆ ಬೆದರಿಕೆ ಹಾಕುತ್ತಿದ್ದಾಳೆಂದೂ ತಾಯಿಯ ಆರೋಪ
ಸಹಾರನ್ಪುರ (ಉತ್ತರ ಪ್ರದೇಶ) - ಹಾಪುಡ್ನಲ್ಲಿ ಜಿಲ್ಲಾ ಸರಬರಾಜು ಅಧಿಕಾರಿಯಾಗಿರುವ ಸೀಮಾ ಚೌಧರಿ ಅವರ ವಿರುದ್ಧ ಅವರ ತಾಯಿಯೇ ದೂರು ದಾಖಲಿಸಿದ್ದಾರೆ. ತಾಯಿ ಮುನೇಶ್ ರಾಣಿ ಅವರು ತನ್ನ ಮಗಳ ವಿರುದ್ಧ ವಂಚನೆ, ನಕಲಿ ದಾಖಲೆಗಳ ಸೃಷ್ಟಿ, ಭೂಮಿ ಕಬಳಿಸುವ ಪಿತೂರಿ ಮತ್ತು ತನ್ನ ಬ್ಯಾಂಕ್ ಖಾತೆಗೆ ಕಪ್ಪು ಹಣದ 15 ಲಕ್ಷ ರೂಪಾಯಿಗಳನ್ನು ಜಮಾ ಮಾಡಿದ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಇದರ ಬೆನ್ನಲ್ಲೇ ಪೊಲೀಸರು ಸೀಮಾ ಚೌಧರಿ ಸೇರಿದಂತೆ 5 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
1. ಮುನೇಶ್ ರಾಣಿ ಅವರು ತಮ್ಮ ಮಗಳು ಸೀಮಾ ಚೌಧರಿ ಸೇರಿದಂತೆ 5 ಜನರ ವಿರುದ್ಧ ಪೊಲೀಸ್ ಉಪಮಹಾನಿರೀಕ್ಷಕರಿಗೆ (DIG) ದೂರು ನೀಡಿದ್ದಾರೆ. ಅವರು ತಮ್ಮ ದೂರಿನಲ್ಲಿ ಸಂಜೀವ್ ಕುಮಾರ್ ಚೌಧರಿ, ರಾಜೇಂದ್ರ ರಾಣಾ, ಗಂಭೀರ್, ನರೇಶ್ ಕುಮಾರ್ ಮತ್ತು ಸೀಮಾ ಚೌಧರಿ ಅವರನ್ನು ಆರೋಪಿಗಳೆಂದು ಹೆಸರಿಸಿದ್ದಾರೆ. ತನ್ನ ಮಗಳು ಸೀಮಾ ಚೌಧರಿ ಮತ್ತು ಇತರ ಆರೋಪಿಗಳು ಕೈಜೋಡಿಸಿದ್ದು, ಇವರದ್ದೊಂದು ಭೂ ಮಾಫಿಯಾ ಗ್ಯಾಂಗ್ ಇದೆ. ಈ ಗ್ಯಾಂಗ್ ಭೂಮಿಯನ್ನು ಲೂಟಿ ಮಾಡುತ್ತದೆ ಎಂದು ಅವರು ಆರೋಪಿಸಿದ್ದಾರೆ.
2. 'ಸಂಜೀವ್ ಕುಮಾರ್ ಮತ್ತು ರಾಜೇಂದ್ರ ರಾಣಾ ನನಗೆ ಮಾಹಿತಿ ನೀಡದೆ ನನ್ನ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿಗಳನ್ನು ಜಮಾ ಮಾಡಿದ್ದಾರೆ. ಗಾಜಿಯಾಬಾದ್ನ ಐಸಿಐಸಿಐ (ICICI) ಬ್ಯಾಂಕ್ನಲ್ಲಿ ನನ್ನ ಮಗಳು ಈ ಖಾತೆ ತೆರೆದಿದ್ದಳು ಮತ್ತು ಅವಳೇ ಖಾತೆಯನ್ನು ನಿರ್ವಹಿಸುತ್ತಿದ್ದಳು. ಖಾತೆ ತೆರೆಯುವಾಗ ಸೀಮಾ ಚೌಧರಿ ತನ್ನದೇ ಇಮೇಲ್ ಐಡಿಯನ್ನು ಬಳಸಿದ್ದಳು. ಸೀಮಾ ಚೌಧರಿ ತನ್ನ 'ಕಪ್ಪು ಹಣ'ವನ್ನು ನನ್ನ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದಳು, ಇದರ ಅರಿವು ನನಗಿರಲಿಲ್ಲ' ಎಂದು ತಿಳಿಸಿದ್ದಾರೆ.
3. 'ಆರೋಪಿಗಳು ನನಗೆ ಬೆದರಿಕೆ ಹಾಕುತ್ತಿದ್ದು, ಜೀವ ಬೆದರಿಕೆಯನ್ನೂ ಹಾಕಿದ್ದಾರೆ' ಎಂದೂ ಮುನೇಶ್ ರಾಣಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
4. ಮುನೇಶ್ ರಾಣಿ ಅವರು ತಮಗೆ ದೂರು ನೀಡಿದ್ದು, ಈ ಪ್ರಕರಣವನ್ನು ತನಿಖೆಗಾಗಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (SP) ಕಳುಹಿಸಿಕೊಡಲಾಗಿದೆ ಎಂದೂ ಪೊಲೀಸ್ ಉಪಮಹಾನಿರೀಕ್ಷಕ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ.
5. ಪ್ರಾಥಮಿಕ ತನಿಖೆಯ ನಂತರ ಸೀಮಾ ಚೌಧರಿ ಮತ್ತು ಇತರರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೀಮಾ ಚೌಧರಿ ಅಥವಾ ಇತರ ಯಾವುದೇ ಆರೋಪಿಗಳು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

