ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ
ಮುಂಬಯಿ - ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಮುಖ್ಯ ಸೂತ್ರಧಾರನನ್ನು ಭಿವಂಡಿ ಪೊಲೀಸರು ಬಿಹಾರದಿಂದ ಬಂಧಿಸಿದ್ದಾರೆ. ಬ್ರಿಜೇಂದ್ರ ಗುಪ್ತ ಎಂಬುದು ಈತನ ಹೆಸರಾಗಿದ್ದು, ಈತ ಪ್ರಶ್ನೆಪತ್ರಿಕೆ ಸೋರಿಕೆಯ ದೊಡ್ಡ ಜಾಲವನ್ನೇ ನಡೆಸುತ್ತಿದ್ದನು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈತನ ಪತ್ತೆಗಾಗಿ ಪೊಲೀಸರು ದೇಶದ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಈ ಪ್ರಕರಣದಲ್ಲಿ ಅಪರಾಧ ದಾಖಲಾದ ನಂತರ ಬಿಜೇಂದ್ರ ಗುಪ್ತ ತಲೆಮರೆಸಿಕೊಂಡಿದ್ದನು. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದಾಗಿ ಜೂನ್ ೨೮ ರಂದು ನಡೆಯಬೇಕಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ರಾಜೀವ ಕುಮಾರ, ಆಕಾಶ ಕುಮಾರ ಮತ್ತು ಧೀರಜ ಕುಮಾರ ಅವರನ್ನು ಈಗಾಗಲೇ ಬಂಧಿಸಿದ್ದಾರೆ. ಭಿವಂಡಿ ಪೊಲೀಸರು ಇಲ್ಲಿಯವರೆಗೆ ಈ ಪ್ರಕರಣದಲ್ಲಿ ೧೨ ಜನರನ್ನು ಬಂಧಿಸಿದ್ದಾರೆ.

