ಅಯೋಧ್ಯೆ : ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತನ್ನ ಆಡಳಿತಾತ್ಮಕ ರಚನೆಯನ್ನು ಸಂಪೂರ್ಣವಾಗಿ ಮರುಪರಿಶೀಲಿಸುತ್ತಿದ್ದು, ಭಾರತೀಯ ವಾಯುಪಡೆಯ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರನ್ನು ಸಂಸ್ಥೆಯ ಮೊದಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ನೇಮಕ ಮಾಡಿದೆ.
ದೇವಾಲಯಕ್ಕೆ ಹರಿದುಬರುತ್ತಿರುವ ಕಾಣಿಕೆಗಳು ಹಾಗೂ ದೇಣಿಗೆಗಳಲ್ಲಿನ ಅಕ್ರಮ ಆರೋಪಗಳ ಹಿನ್ನೆಲೆಯಲ್ಲಿ, ಹೆಚ್ಚಿನ ಹಣಕಾಸು ಪಾರದರ್ಶಕತೆ ಮತ್ತು ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಈ ವೃತ್ತಿಪರ ಆಡಳಿತ ಮಂಡಳಿಯನ್ನು ಮರುರಚಿಸಲಾಗಿದೆ.
ಯಾರೀ ಜಿತೇಂದ್ರ ಮಿಶ್ರಾ?
ಸೇವಾ ಹಿನ್ನೆಲೆ: ಡಿಸೆಂಬರ್ 6, 1986 ರಂದು ಭಾರತೀಯ ವಾಯುಪಡೆಯಲ್ಲಿ ಫೈಟರ್ ಪೈಲಟ್ ಆಗಿ ಸೇರ್ಪಡೆಯಾದ ಜಿತೇಂದ್ರ ಮಿಶ್ರಾ, 38 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕಾರ್ಗಿಲ್ ಯುದ್ಧದ 'ಆಪರೇಷನ್ ಸಫೇದ್ ಸಾಗರ್' ಸಮಯದಲ್ಲಿ ಮಿರಾಜ್ 2000 ವಿಮಾನಗಳಲ್ಲಿ ಲೇಸರ್ ಮಾರ್ಗದರ್ಶಿತ ಬಾಂಬ್ಗಳನ್ನು ಅಳವಡಿಸಿದ ಪ್ರಮುಖ ತಂಡದಲ್ಲಿದ್ದರು.
ಸಾಹಸ ಹಾಗೂ ಪ್ರಶಸ್ತಿ:3,000 ಗಂಟೆಗೂ ಹೆಚ್ಚು ಕಾಲ ವಿಮಾನ ಹಾರಾಟದ ಅನುಭವ ಹೊಂದಿರುವ ಇವರು 'ಆಪರೇಷನ್ ಸಿಂದೂರ್' ಸಮಯದಲ್ಲಿ ವೆಸ್ಟರ್ನ್ ಏರ್ ಕಮಾಂಡ್ ಮುಖ್ಯಸ್ಥರಾಗಿ ಯಶಸ್ವಿ ನೇತೃತ್ವ ವಹಿಸಿದ್ದರು.ಇವರ ಅತ್ಯುತ್ತಮ ಸೇವೆಗಾಗಿ ಸರ್ವೋತ್ತಮ ಯುದ್ಧ ಸೇವಾ ಪದಕ (SYSM), ಅತಿ ವಿಶಿಷ್ಟ ಸೇವಾ ಪದಕ (AVSM) ಮತ್ತು ವಿಶಿಷ್ಟ ಸೇವಾ ಪದಕ (VSM) ಲಭಿಸಿವೆ.
ಸ್ಥಳೀಯ ನಂಟು:ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಜಿತೇಂದ್ರ ಮಿಶ್ರಾ, ಅಯೋಧ್ಯೆಯ ಸಮೀಪದವರಾಗಿದ್ದಾರೆ.
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯಿತು?
ಜುಲೈ 6, 2026 ರಂದು ಸಿಕ್ಕಿಂ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ ಅವರ ನೇತೃತ್ವದಲ್ಲಿ ಮೂರು ಸದಸ್ಯರ ಶೋಧನಾ ಸಮಿತಿಯನ್ನು ರಚಿಸಲಾಗಿತ್ತು. ಟ್ರಸ್ಟ್ ಗೆ ದೇಶಾದ್ಯಂತ ಬಂದಿದ್ದ 5,585 ಅರ್ಜಿಗಳಲ್ಲಿ 16 ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಮುಖಾಮುಖಿ ಸಂದರ್ಶನ ನಡೆಸಲಾಗಿತ್ತು. ಕೊನೆಯಲ್ಲಿ ಶಿಫಾರಸು ಮಾಡಲಾದ 3 ಪ್ರಮುಖ ಹೆಸರುಗಳಲ್ಲಿ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರನ್ನು ಟ್ರಸ್ಟ್ ಅಂತಿಮವಾಗಿ ಆಯ್ಕೆ ಮಾಡಿದೆ.

