Dailyhunt Logo
  • Light mode
    Follow system
    Dark mode
    • Play Story
    • App Story
ಬ್ರಾಹ್ಮಣ ಅಭಿವೃದ್ಧಿ ಮಂಡಳಿ: ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಗೆ ಅರ್ಜಿ ಆಹ್ವಾನ

ಬ್ರಾಹ್ಮಣ ಅಭಿವೃದ್ಧಿ ಮಂಡಳಿ: ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಗೆ ಅರ್ಜಿ ಆಹ್ವಾನ

ಚಿತ್ರದುರ್ಗ. ಜುಲೈ31: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ 2026-27ನೇ ಸಾಲಿನ 'ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆ'ಯಡಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಂದ ಸಾಲ-ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನ.

ಈ ಯೋಜನೆಯಡಿ ಹಸು ಸಾಕಾಣಿಕೆ, ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಹೋಟೆಲ್ ಉದ್ಯಮ (ಕ್ಯಾಟರಿಂಗ್), ಅಂಗಡಿ, ಟ್ಯಾಕ್ಸಿ ಹಾಗೂ ಟೈಲರಿಂಗ್ ಉದ್ದೇಶಗಳಿಗಾಗಿ ಕನಿಷ್ಠ ರೂ.1 ಲಕ್ಷ ದಿಂದ ಗರಿಷ್ಠ ರೂ.2 ಲಕ್ಷಗಳವರೆಗೆ ಸಾಲ ನೀಡಲಾಗುತ್ತದೆ. ಒಟ್ಟು ಮೊತ್ತದಲ್ಲಿ ಶೇ. 20 ರಷ್ಟು ಸಬ್ಸಿಡಿ (ಸಹಾಯಧನ) ಲಭ್ಯವಿದ್ದು, ಉಳಿದ ಶೇ.80 ರಷ್ಟು ಸಾಲದ ಮೊತ್ತಕ್ಕೆ ಶೇ. 4 ರ ಬಡ್ಡಿದರದಲ್ಲಿ ಒಟ್ಟು 34 ಕಂತುಗಳಲ್ಲಿ ಮರು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿದಾರರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದು, ಚಾಲ್ತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ಪ್ರಮಾಣ ಪತ್ರ ಹೊಂದಿರಬೇಕು ಹಾಗೂ ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. 18 ರಿಂದ 65 ವರ್ಷದೊಳಗಿನವರು ಈ ಯೋಜನೆಗೆ ಅರ್ಹರಾಗಿದ್ದು, ಶೇ. 33 ರಷ್ಟು ಮಹಿಳೆಯರಿಗೆ ಹಾಗೂ ಶೇ.5 ರಷ್ಟು ವಿಶೇಷ ಚೇತನರಿಗೆ ಮೀಸಲಾತಿ ಇರಲಿದೆ. ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅವಕಾಶವಿರುವುದಿಲ್ಲ. ಅರ್ಜಿದಾರರ ಆಧಾರ್ ಸಂಖ್ಯೆಯು ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು ಮತ್ತು ಸಾಲದ ಉದ್ದೇಶವನ್ನು ಅರ್ಜಿಯಲ್ಲಿ ಕನಿಷ್ಠ 10 ಪದಗಳಿಗಿಂತ ಕಡಿಮೆಯಿಲ್ಲದಂತೆ ಸ್ಪಷ್ಟವಾಗಿ ನಮೂದಿಸಬೇಕು.
ಆಸಕ್ತರು ಮಂಡಳಿಯ ವೆಬ್‍ಸೈಟ್ www.ksbdb.karnataka.gov.in ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಆಗಸ್ಟ್ 31, 2026ರ ಸಂಜೆ 5.30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 8762249230 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Suddione