ಡೊನಾಲ್ಡ್ ಟ್ರಂಪ್ ಅವರು 2025ರಲ್ಲಿ ಮತ್ತೆ ಶ್ವೇತಭವನವನ್ನು ಪ್ರವೇಶಿಸಿದಾಗ ಭಾರತದ ಪಾಳಯದಲ್ಲಿ ಅಂತಹ ಆತಂಕವೇನೂ ಇರಲಿಲ್ಲ. ಟ್ರಂಪ್ ಬಗ್ಗೆ ತನಗೆ ಸಾಕಷ್ಟು ತಿಳಿದಿದೆ ಎಂದೇ ಭಾರತ ನಂಬಿ ಕುಳಿತಿತ್ತು. ಇದಕ್ಕೆ ಮುಖ್ಯ ಕಾರಣ ಟ್ರಂಪ್ ಅವರ ಮೊದಲ ಅವಧಿ. ಅದು ನಿಜಕ್ಕೂ ಭಾರತಕ್ಕೆ ಭರವಸೆದಾಯಕವಾಗಿತ್ತು.
ಆ ಅವಧಿಯಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳು ಯಾವುದೇ ತೊಂದರೆ ಇಲ್ಲದೆ ಸುಗಮವಾಗಿ ಬೆಳೆದಿದ್ದವು. 2017ರಲ್ಲಿ ಕ್ವಾಡ್ಗೆ ಮರುಜೀವ ನೀಡಿದ್ದು ಅತ್ಯಂತ ಚೇತೋಹಾರಿಯಾಗಿದ್ದು ಕೂಡ ಇನ್ನೊಂದು ಕಾರಣ.
ಹಾಗೆ ಭಾರತ ಅಷ್ಟೊಂದು ಆತ್ಮವಿಶ್ವಾಸದಿಂದ ಬೀಗುವುದಕ್ಕೆ ಕಾರಣವೂ ಇತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್ ಅವರ ಜೊತೆ ಉತ್ತಮ ವೈಯಕ್ತಿಕ ಒಡನಾಟವನ್ನು ಹೊಂದಿದ್ದರು. ಅದು ಕೆಲವೇ ಕೆಲವರು ಹೊಂದಬಹುದಾಗಿದ್ದ ಒಡನಾಟವಾಗಿತ್ತು. ಇದಕ್ಕೆ ಹೋಸ್ಟನ್ನಲ್ಲಿ ಏರ್ಪಡಿಸಲಾದ ʼಹೌದಿ ಮೋದಿʼ ಕಾರ್ಯಕ್ರಮ ಮತ್ತು ಅಹಮದಾಬಾದ್ನಲ್ಲಿ ಅತ್ಯಂತ ಎಚ್ಚರಿಕೆಯಿಂದ ಆಯೋಜಿಸಲಾಗಿದ್ದ ʼನಮಸ್ತೇ ಟ್ರಂಪ್ʼ ಕಾರ್ಯಕ್ರಮದ ಅದ್ದೂರಿತನವೇ ಸಾಕ್ಷಿ ಎಂದು ರಾಜತಾಂತ್ರಿಕರು ನೆನಪಿಸಿಕೊಳ್ಳುತ್ತಾರೆ.
ಇಂತಹ ಇತಿಹಾಸದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಭಾರತದ ಸುಂಕ ಮತ್ತು ವ್ಯಾಪಾರದ ವ್ಯವಸ್ಥೆಗಳ ವಿಚಾರದಲ್ಲಿ ಟ್ರಂಪ್ ಅವರು ಕಾಲಕಾಲಕ್ಕೂ ಮುಂದೊತ್ತುತ್ತಿದ್ದ ಮಾತುಕತೆಯನ್ನೂ ಕೂಡ ಇದೇ ಶೈಲಿಯ ಭಾಗವೆಂದು ಪರಿಗಣಿಸಲಾಗಿತ್ತು.
ಹದ ತಪ್ಪಿದ ಆತ್ಮವಿಶ್ವಾಸ
ಹಾಗಿದ್ದೂ ಆ ಆತ್ಮವಿಶ್ವಾಸವು ಹಾದಿ ತಪ್ಪಿತ್ತು ಎಂಬುದು ಸಾಬೀತಾಯಿತು. ಕಳೆದ ಒಂದೇ ಒಂದು ವರ್ಷದಲ್ಲಿ ಭಾರತ-ಅಮೆರಿಕ ಸಂಬಂಧಗಳು ಹಿಂದೆಂದೂ ಕಾಣದಷ್ಟು ತೀವ್ರ ಹಿನ್ನಡೆಯನ್ನು ಅನುಭವಿಸಿದವು. ಟ್ರಂಪ್ ಅವರು ಕಠಿಣ ಸುಂಕಗಳನ್ನು ವಿಧಿಸಿದರು. ಅತ್ಯಂತ ನಿಷ್ಠುರವಾಗಿ ನಡೆದುಕೊಂಡರು. ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ನೆಲೆಸಲು ತಮ್ಮ ಮಧ್ಯಸ್ಥಿಕೆಯೇ ಕಾರಣ ಎಂದು ಪದೇ ಪದೇ ಬಡಾಯಿಕೊಚ್ಚಿಕೊಂಡರು.
ಸೂಕ್ತ ದಾಖಲೆಗಳನ್ನು ಹೊಂದಿರದ ಭಾರತೀಯರನ್ನು ಮಿಲಿಟರಿ ವಿಮಾನಗಳಲ್ಲಿ ದೇಶದಿಂದ ಗಂಟುಮೂಟೆ ಕಟ್ಟುವಂತೆ ಮಾಡುವ ಆದೇಶ ಹೊರಡಿಸಿದರು. ರಷ್ಯಾದ ತೈಲವನ್ನು ಭಾರತ ಖರೀದಿ ಮಾಡುತ್ತಿರುವುದಕ್ಕೆ ನಿರ್ಬಂಧಗಳ ಬೆದರಿಕೆ ಹಾಕಿದರು. ಜೊತೆಗೆ ಪಾಕಿಸ್ತಾನದ ಮೇಲೆ ಅಮೆರಿದ ಆಸಕ್ತಿ ಮತ್ತೆ ಚಿಗುರಿಕೊಂಡಿದೆ ಎಂಬ ಸುಳಿವು ನೀಡಿದರು.
ಇದೇ ಹೊತ್ತಿನಲ್ಲಿ ಆರ್ಥಿಕ ರಾಷ್ಟ್ರೀಯತೆ ಮತ್ತು ವಲಸೆ ವಿರೋಧಿ ರಾಜಕೀಯದತ್ತ ಅಮೆರಿಕ ಇಟ್ಟ ಬದಲಾವಣೆಯ ಹೆಜ್ಜೆಯಿಂದಾಗಿ ಹೆಚ್-1ಬಿ ವೀಸಾಗಳು, ತಂತ್ರಜ್ಞಾನ ಉದ್ಯೋಗಿಗಳು, ವ್ಯಾಪಾರ, ಹೂಡಿಕೆ ಮತ್ತು ಉನ್ನತ ಶಿಕ್ಷಣ ಸೇರಿದಂತೆ ಭಾರತದೊಂದಿಗಿನ ಸಂಬಂಧದ ಪ್ರಮುಖ ಕ್ಷೇತ್ರಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿತು.
ಬೇಕಿದೆ ಸಂಯಮದ ನಿರೀಕ್ಷೆ
ಪ್ರಸ್ತುತ ಉಂಟಾಗಿರುವ ಏರಿಳಿತವನ್ನು ಕೇವಲ ತಾತ್ಕಾಲಿಕ ಘಟ್ಟವೆಂದು ಪರಿಗಣಿಸುವುದು ಭಾರತದ ಒಲವಾಗಿರುತ್ತದೆ. ಟ್ರಂಪ್ ಅವರ ಅಧಿಕಾರಾವಧಿಯ ಉಳಿದ ಭಾಗವನ್ನು ಭಾರತವು ಹೇಗಾದರೂ ಸಹಿಸಿಕೊಂಡು, ಹೆಚ್ಚು ನಿರೀಕ್ಷಿಸಬಹುದಾದ ಮತ್ತೊಂದು ಆಡಳಿತವು ಅಧಿಕಾರಕ್ಕೆ ಬರುವವರೆಗೆ ಕಾಯಬೇಕಾಗುತ್ತದೆ. ಯಾಕೆಂದರೆ ಉಭಯ ದೇಶಗಳ ಸಂಬಂಧದ ಬುನಾದಿಯು ಅಷ್ಟು ಗಟ್ಟಿಯಾಗಿದೆ ಎಂದು ಅನೇಕ ರಾಜತಾಂತ್ರಿಕರು ವಾದಿಸುತ್ತಾರೆ.
ಈಗಿನ ಸಮಸ್ಯೆಯು ಕೇವಲ ಟ್ರಂಪ್ ಅವರನ್ನು ಮಾತ್ರ ಸುತ್ತಿಕೊಳ್ಳದೆ ವಲಸೆ, ವ್ಯಾಪಾರ ಮತ್ತು ಜಾಗತೀಕರಣದ ಕುರಿತು ಅಮೆರಿಕದ ದೃಷ್ಟಿಕೋನವನ್ನೇ ಬದಲಿಸುವ ಅತ್ಯಂತ ಗಹನ ರಾಜಕೀಯ ಬದಲಾವಣೆಯೇ ಆಗಿಬಿಟ್ಟರೆ ಏನು ಮಾಡುವುದು? ಒಮ್ಮೆ ವೀಸಾ ಮತ್ತು ತಂತ್ರಜ್ಞಾನದ ಮೇಲಿನ ನಿರ್ಬಂಧಗಳು ಕಠಿಣವಾದರೆ ಆಡಳಿತದಲ್ಲಿ ಬದಲಾವಣೆ ಉಂಟಾದರೂ ಅದರ ನಿಯಮಗಳು ಸುಲಭಕ್ಕೆ ಬದಲಾಗಲು ಸಾಧ್ಯವಿಲ್ಲ.
ಹೆಚ್-1ಬಿ ವೀಸಾದಿಂದ ಹಿಡಿದು ವಿದ್ಯಾರ್ಥಿಗಳ ಪ್ರವೇಶಾತಿಯ ವರೆಗೆ ಮತ್ತು ವಿದೇಶಾಂಗ ನೀತಿಯ ಸಾಧನವಾಗಿ ನಿರ್ಬಂಧಗಳನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳುವವರೆಗೆ ಅಶಾಂತಿಯ ಲಕ್ಷಣಗಳು ಎಲ್ಲೆಡೆ ಇವೆ. ಯಾವ ಪರಿಸ್ಥಿತಿಯೂ ಹಿಂದೆ ಇದ್ದಂತಿಲ್ಲ.
ಸುಂಕದ ಬೆದರಿಕೆಗಳು ನಿಂತಿಲ್ಲ
ರಷ್ಯಾದ ತೈಲವನ್ನು ಖರೀದಿಸುವ ದೇಶಗಳ ಮೇಲೆ ಶೇಕಡಾ 100 ರವರೆಗೆ ಬೃಹತ್ ಸುಂಕ ವಿಧಿಸುವುದಾಗಿ ಟ್ರಂಪ್ ಇತ್ತೀಚಿಗೆ ಇನ್ನೊಂದು ಬೆದರಿಕೆ ಹಾಕಿದ್ದಾರೆ. ಅದೂ ಕೂಡ ಭಾರತದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಸೆನೆಟ್ ಈಗಾಗಲೇ ಈ ಮಸೂದೆಯನ್ನು ಅಂಗೀಕರಿಸಿದ್ದು, ಇದು ಕಾನೂನು ರೂಪ ತಳೆಯುವ ಮೊದಲು ಈಗ ಪ್ರತಿನಿಧಿಗಳ ಸಭೆಯ ಮೂಲಕ ಅಂಗೀಕಾರಗೊಳ್ಭಬೇಕಿದೆ. ಸುಂಕದ ದರವನ್ನು ನಿಗದಿಪಡಿಸಲು ಅಥವಾ ತನ್ನ ಇಚ್ಛೆಯಂತೆ ವಿನಾಯಿತಿ ನೀಡಲು ಅಧ್ಯಕ್ಷರಿಗೆ ವಿವೇಚನಾ ಅಧಿಕಾರವಿರುತ್ತದೆ. ಭಾರತವು ಇನ್ನೂ ರಷ್ಯಾದ ತೈಲವನ್ನು ಖರೀದಿಸುತ್ತಿದೆ. 2026ರ ಜೂನ್ ಹೊತ್ತಿಗೆ ಭಾರತದ ಇಂಧನದ ಆಮದುಗಳಲ್ಲಿ ರಷ್ಯಾದ ತೈಲದ ಪಾಲು ಶೇ. 42.9ರಷ್ಟಿತ್ತು. ಟ್ರಂಪ್ ಇದೇ ರೀತಿ ತಮ್ಮ ಬೆದರಿಕೆಯನ್ನು ಮುಂದುವರಿಸಿದರೆ ಭಾರತ ಇದನ್ನು ಪರ್ಯಾಯ ಮೂಲಗಳಿಂದ ಬದಲಾಯಿಸುವ ಅನಿವಾರ್ಯತೆ ಸೃಷ್ಟಿಯಾದೀತು. ಇದು ಭಾರತದ ಇಂಧನ ಪೂರೈಕೆಯ ಹರಿವನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ.
ಶ್ವೇತಭವನವು "ದೊಡ್ಡ ಟ್ರಾನ್ಸ್ಶಿಪ್ಮೆಂಟ್ ಹಗರಣ" ಎಂದು ಕರೆಯುವುದರ ವಿರುದ್ಧ ಅಮೆರಿಕವು ಕಠಿಣ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದಂತೆ, ಭಾರತದ ಮೇಲೂ ಅದರ ಪರಿಣಾಮ ಬಿದ್ದೇ ಬೀಳುತ್ತದೆ. ಮೂರನೇ ದೇಶದ ಮೂಲಕ ಬರುವ ಚೀನಾದ ರಫ್ತುಗಳನ್ನು ಗುರಿಯಾಗಿಸಲಾಗುತ್ತದೆ. ಕರಡು ರೂಪದಲ್ಲಿರುವ ಈ ನಿಯಂತ್ರಣವು, ಸಿದ್ಧಪಡಿಸಿದ ಉತ್ಪನ್ನಕ್ಕಾಗಿ ಚೀನಾದಿಂದ ಬರುವ ಕಚ್ಚಾ ವಸ್ತುಗಳನ್ನು ಅವಲಂಬಿಸಿರುವ ದೇಶಗಳನ್ನು ಕೂಡ ಒಳಗೊಂಡಿದೆ. ಎಲೆಕ್ಟ್ರಾನಿಕ್ಸ್, ನವೀಕರಿಸಬಹುದಾದ ಇಂಧನ ಮತ್ತು ಔಷಧಗಳು ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಭಾರತೀಯ ಉತ್ಪಾದನೆಯು ಚೀನಾದ ಬಿಡಿಭಾಗಗಳನ್ನು ಹೆಚ್ಚು ಅವಲಂಬಿಸಿದೆ. ಈ ಕ್ರಮವು ಪ್ರಸ್ತುತ ಪರಿಶೀಲನೆಯಲ್ಲಿದೆ. ಆದರೆ ಅಮೆರಿಕದ ಸ್ಥಳೀಯ ಉದ್ಯಮವನ್ನು ಉತ್ತೇಜಿಸುವ ಟ್ರಂಪ್ ಅವರ ಪ್ರಯತ್ನಇದೆಂದು ಬಿಂಬಿಸಿದರೆ ಅಚ್ಚರಿಯೇನೂ ಇಲ್ಲ.
ಭಾರತೀಯ ಉತ್ಪಾದನಾ ವಲಯವು ಚೀನಾದಿಂದ ಬರುವ ಮಧ್ಯಂತರ ವಸ್ತುಗಳ ಮೇಲೆ ಹೆಚ್ಚು ಅವಲಂಬಿವಾಗಿರುವ ಹಿನ್ನೆಲೆಯಲ್ಲಿ ಇದು ನಮ್ಮ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಬಹುದು. ಇದು ನಿರ್ದಿಷ್ಟವಾಗಿ ಅಮೆರಿಕಕ್ಕೆ ಭಾರತದ ರಫ್ತಿನ ದೊಡ್ಡ ಪಾಲನ್ನು ಹೊಂದಿರುವ ಮೊಬೈಲ್ ಫೋನ್ಗಳು ಮತ್ತು ಔಷಧಗಳಿಗೆ ಹೆಚ್ಚು ಅನ್ವಯವಾಗುತ್ತದೆ ಎಂದು ಜೆಎನ್ಯು ಮಾಜಿ ಪ್ರಾಧ್ಯಾಪಕ ಬಿಸ್ವಜಿತ್ ಧರ್ ಹೇಳುತ್ತಾರೆ.
ವಿದ್ಯಾರ್ಥಿ ಮತ್ತು ಹೆಚ್-1ಬಿ ವೀಸಾಗಳು
ಎಫ್-1 ಮತ್ತು ಜೆ-ವಿಸಾಗಳನ್ನು ಪಡೆಯುವುದು ಇನ್ನಷ್ಟು ಕಷ್ಟವಾಗುತ್ತಿದೆ. ಪೋಸ್ಟ್ಗಳ ಸಾಮಾಜಿಕ ಮಾಧ್ಯಮ ಪರಿಶೀಲನೆಯನ್ನು ಒಳಗೊಂಡ ಕಠಿಣ ಸ್ಕ್ರೀನಿಂಗ್ ಪ್ರಕ್ರಿಯೆ ಮತ್ತು ಪ್ರಕ್ರಿಯೆಗಾಗಿ ತೆಗೆದುಕೊಳ್ಳುವ ದೀರ್ಘ ಸಮಯವು ಭಾರತೀಯ ವಿದ್ಯಾರ್ಥಿಗಳಿಗೆ ವೀಸಾಗಳ ಅನುಮೋದನೆ ರೇಟಿಂಗ್ನ್ನು F-1 ವಿಸಾಗಳಲ್ಲಿ ಶೇಕಡಾ 62 ರಷ್ಟು ವರ್ಷದಿಂದ ವರ್ಷಕ್ಕೆ ಕುಸಿಯುವಂತೆ ಮಾಡಿದೆ. ಕೆಲಸ ಕಳೆದುಕೊಂಡ ಹೆಚ್-1ಬಿ ಕಾರ್ಮಿಕರಿಗೆ 60 ದಿನಗಳ ಅವಧಿಯನ್ನು ರದ್ದುಗೊಳಿಸಲು ಮತ್ತು ವಿಸ್ತರಣೆ ಶುಲ್ಕವನ್ನು 4,000 ಡಾಲರ್ಗೆ ಏರಿಸಲು ಆಡಳಿತವು ಪ್ರಸ್ತಾಪ ಮಂಡಿಸಿದೆ. ಇವು ಪ್ರಸ್ತುತ ಕೇವಲ ಪ್ರಸ್ತಾಪಗಳಾಗಿವೆ, ಆದರೆ ಅವು ಸುಲಭವಾಗಿ ಸಾಮಾನ್ಯ ನಿಯಮಗಳಾಗಿ ಬದಲಾಗಿ ಬಿಡಬಹುದು. ಇದಕ್ಕೆ ಕೃತಕ ಬುದ್ಧಿಮತ್ತೆಯ ವ್ಯಾಪಕ ಬಳಕೆಯನ್ನು ಸೇರಿಸಿ, ಇದು ಹೆಚ್ಚಿನ ವಿದೇಶಿ ಕಾರ್ಮಿಕರ ಉದ್ಯೋಗ ಕಡಿತಕ್ಕೆ ಕಾರಣವಾಗುತ್ತದೆ.
ಅಮೆರಿಕಕ್ಕೆ ಭಾರತದ ಅಗತ್ಯವಿರುವುದಕ್ಕಿಂತ ಹೆಚ್ಚಾಗಿ ಭಾರತಕ್ಕೆ ಅಮೆರಿಕದ ಅಗತ್ಯವಿದೆ ಎಂಬುದು ಸತ್ಯ.
ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧವು ತಂತ್ರಜ್ಞಾನ, ವಿಜ್ಞಾನ, ಆವಿಷ್ಕಾರ, ರಕ್ಷಣೆ ಮತ್ತು ವ್ಯಾಪಾರದ ಹೂಡಿಕೆಗಳಲ್ಲಿ ಸ್ಥಿರವಾದ ಪ್ರಗತಿಯನ್ನು ಸಾಧಿಸಿರುವ ಒಂದು ನಿರ್ಣಾಯಕ ಸಂಬಂಧ ಎಂದು ನಿವೃತ್ತ ರಾಯಭಾರಿ ಅನಿಲ್ ವಾಧ್ವಾ ಹೇಳುತ್ತಾರೆ. ಟ್ರಂಪ್ ಆಡಳಿತದಲ್ಲಿ, ಭಾರತವನ್ನು ನಿರ್ಬಂಧಗಳನ್ನು ವಿಧಿಸುವುದಕ್ಕಾಗಿಯೇ ಪ್ರತ್ಯೇಕಿಸಲಾಗಿದೆ, ಪಾಕಿಸ್ತಾನದಂತಹ ದೇಶಗಳಿಗೆ ಹೋಲಿಸಿದರೆ ಆದ್ಯತೆಯೇ ಇಲ್ಲದ ಪಾಲುದಾರನಂತೆ ನೋಡಿಕೊಳ್ಳಲಾಗಿದೆ, ವ್ಯಾಪಾರ ಮತ್ತು ಸುಂಕಗಳ ವಿಚಾರದಲ್ಲಿ ಒತ್ತಡಕ್ಕೆ ಒಳಪಡಿಸಲಾಗಿದೆ. ಅಲ್ಲದೆ, ಇಂಡೋ-ಪೆಸಿಫಿಕ್ ವಲಯದಲ್ಲಿ ಚೀನಾವನ್ನು ಸಮತೋಲನಕ್ಕೆ ಒಳಪಡಿಸಲು ಭಾರತವು ಇನ್ನು ಮುಂದೆ ಅನಿವಾರ್ಯ ಪಾಲುದಾರನಾಗದ ಕಾರಣ ರಕ್ಷಣೆ, ವಿಜ್ಞಾನ ಹಾಗೂ ತಂತ್ರಜ್ಞಾನದಂತಹ ಸಂಬಂಧಗಳು ಮಂಕಾಗಿವೆ.
ಕುಸಿದ ಪ್ರಾಮುಖ್ಯತೆ
ವ್ಯಾಪಾರ ಸಂಬಂಧಗಳನ್ನು ಸ್ಥಿರಗೊಳಿಸಲು ಟ್ರಂಪ್ ಅವರು ಚೀನಾದೊಂದಿಗೆ ಕೈಗೊಂಡಿರುವ ಇತ್ತೀಚಿನ ಸಂಪರ್ಕದಿಂದಾಗಿ, ಭಾರತದ ಕಾರ್ಯತಂತ್ರದ ಮೇಲಿನ ಪ್ರಾಮುಖ್ಯತೆಯು ಕಡಿಮೆಯಾಗಿದೆ.
ರಕ್ಷಣಾ ಸಹಕಾರದ ಹಿಂದಿನ ಕಾರ್ಯತಂತ್ರದ ತುರ್ತು ಅಗತ್ಯವಾಗಿ ಚೀನಾದ ಸವಾಲು ದೀರ್ಘಕಾಲದಿಂದಲೂ ಇದೆ. ಭಾರತವು ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಂತೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ತನ್ನ ಪ್ರಭಾವ ಬೀರುತ್ತದೆ ಮತ್ತು ಚೀನಾವನ್ನು ಎದುರಿಸುವಲ್ಲಿ ವಿಶ್ವಾಸಾರ್ಹ ಪಾಲುದಾರನಾಗುತ್ತದೆ ಎಂಬುದು ಅಮೆರಿಕದ ನಿರೀಕ್ಷೆ.
ವಾಣಿಜ್ಯ, ರಕ್ಷಣೆ ಮತ್ತು ರಾಜತಾಂತ್ರಿಕ ಸಹಕಾರದೊಂದಿಗೆ ಈ ಸಂಬಂಧವು ಕಾರ್ಯಾಚರಣೆಯ ಮಟ್ಟದಲ್ಲಿ ಮುಂದುವರಿಯುತ್ತಿದೆ. ಆದರೂ ಅದನ್ನು ಮುನ್ನಡೆಸಲು ಅತ್ಯಂತ ನಿರ್ಣಾಯಕವಾಗಿರುವ ಕಾರ್ಯತಂತ್ರದ ಬೆಂಬಲದ ಕೊರತೆ ಇದೆ ಎಂದು ವಾಷಿಂಗ್ಟನ್ ಮೂಲದ ಹಡ್ಸನ್ ಇನ್ಸ್ಟಿಟ್ಯೂಟ್ನ ಅಪರ್ಣಾ ಪಾಂಡೆ ಹೇಳುತ್ತಾರೆ.ಚೀನಾವೇ ಭವಿಷ್ಯದಲ್ಲಿ ಅಮೆರಿಕದ ಮುಖ್ಯ ಪ್ರತಿಸ್ಪರ್ಧಿಯಾಗಿ ಉಳಿಯುವುದರಿಂದ, ಸಂಬಂಧಗಳಲ್ಲಿ ಉಂಟಾಗಿರುವ ಈ ತಾತ್ಕಾಲಿಕ ಅಡಚಣೆಯ ಬಗ್ಗೆ ಭಾರತ ಚಿಂತಿಸಬೇಕಾಗಿಲ್ಲ ಮತ್ತು ಇದು ಶಾಶ್ವತವಾಗಿರದು ಎಂದು ಅನೇಕ ರಾಜತಾಂತ್ರಿಕ ತಜ್ಞರು ನಂಬಿದ್ದಾರೆ. ಬಹುಶಃ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳುವುದು ಸರಿಯಿರಬಹುದು, ಆದರೆ ಭಾರತವು ಕೇವಲ ಕಾದು ನೋಡುವ ಧೋರಣೆಯನ್ನು ಅನುಸರಿಸಲು ಸಾಧ್ಯವೇ? ಟ್ರಂಪ್ ಅವರ ಎರಡನೇ ಅವಧಿಯ ಆರಂಭಿಕ ತಿಂಗಳುಗಳನ್ನು ನಿರೂಪಿಸಿದ ನಿರ್ಲಕ್ಷ್ಯದ ಧೋರಣೆಯನ್ನು ಭಾರತ ಮುಂದುವರಿಸಲು ಸಾಧ್ಯವಿಲ್ಲ. ಅಮೆರಿಕ ಬದಲಾಗುತ್ತದೆ ಎಂದು ಕಾಯುತ್ತ ಕುಳಿತುಕೊಳ್ಳುವುದು ಇನ್ನು ಮುಂದೆ ಯಾವುದೇ ಕಾರ್ಯತಂತ್ರವಾಗಿರಲು ಸಾಧ್ಯವಿಲ್ಲ; ಇದು ಒಂದು ಅಪಾಯಕಾರಿ ಭ್ರಮೆಯಾಗಬಹುದು. ತನ್ನ ಅಭಿವೃದ್ಧಿಗೆ ಭಾರತಕ್ಕೆ ಅಮೆರಿಕದ ಅಗತ್ಯವಿದೆ. ಟ್ರಂಪ್ ಅವರ ಕಾಲದಲ್ಲಿ ಹೇಗೆ ಬದುಕುಳಿಯಬೇಕು ಎಂಬುದು ಭಾರತದ ಮುಂದಿರುವ ಸವಾಲಲ್ಲ, ಬದಲಾಗಿ ನಿರೀಕ್ಷೆಗೂ ಮೀರಿ ಬದಲಾಗುತ್ತಿರುವ ಅಮೆರಿಕವನ್ನು ನಿಭಾಯಿಸುವುದಾದರೂ ಹೇಗೆ ಎಂಬುದು ನಿಜವಾದ ಸವಾಲು.
"ಅಮೆರಿಕದ ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವ ಪ್ರವೃತ್ತಿಯೆಂದರೆ ವಿದೇಶಿಯರು ಮತ್ತು ಅರ್ಹ ಭಾರತೀಯರ ಬಗ್ಗೆ ಇರುವ ಎಚ್ಚರಿಕೆಯ ಭಾವನೆ, ಅಮೆರಿಕನ್ನರ ಉದ್ಯೋಗಗಳನ್ನು ಇವರು ಕಸಿದುಕೊಳ್ಳುತ್ತಿದ್ದಾರೆ ಎಂಬುದೇ ಇವರ ಬಲವಾದ ನಂಬಿಕೆ," ಎಂದು ವಾಧ್ವಾ ಹೇಳುತ್ತಾರೆ. ಅಮೆರಿಕದ ಸರ್ವೋಚ್ಚ ಭಾವನೆಗೆ ಈಗ ಸವಾಲು ಒಡ್ಡುತ್ತಿರುವ ಚೀನಾದಂತೆ ಭಾರತವು ಕೂಡ ಎದೆಯುಬ್ಬಿಸಿ ಮೇಲೇಳಲು ಅಮೆರಿಕ ಬಿಡುವುದಿಲ್ಲ ಎಂದು ಅಮೆರಿಕದ ಉಪ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ ಅವರ ಹೇಳಿಕೆಯನ್ನು ಕೂಡ ಅವರು ಉಲ್ಲೇಖಿಸುತ್ತಾರೆ, ಅಂದರೆ ಭಾರತವನ್ನು ಉದ್ದೇಶಪೂರ್ವಕವಾಗಿ ಕೆಳಮಟ್ಟದಲ್ಲಿಯೇ ಇಟ್ಟುಕೊಳ್ಳುವುದು ಅದರ ನೀತಿಯಾಗಿದೆ ಎಂದು ವಾಧ್ವಾ ಅವರು ತಮ್ಮ ಮಾತಿನ ಮಧ್ಯೆ ಸೇರಿಸುತ್ತಾರೆ.
ಕಾರ್ಯತಂತ್ರಜ್ಞರಲ್ಲಿ ಆಶಾವಾದ
ಅಮೆರಿಕದೊಂದಿಗೆ ತನ್ನ ದೀರ್ಘಕಾಲೀನ ಸಂಬಂಧವನ್ನು ಪರಿಗಣಿಸುವ ಸಂದರ್ಭದಲ್ಲಿ ಭಾರತವು ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕಾಗಿದೆ. ಸ್ವಾವಲಂಬನೆಯನ್ನು ನೆಲೆಯಲ್ಲೇ ಬೆಳೆಸಿಕೊಳ್ಳುವುದು ಮತ್ತು ಅನಿವಾರ್ಯ ಪಾಲುದಾರನಾಗುವುದರಲ್ಲಿ ಭಾರತದ ಪರಿಹಾರ ಅಡಗಿದೆ, ಅದೇ ಸಮಯದಲ್ಲಿ ಭಾರತದ ಅಭಿವೃದ್ಧಿ ಪಥದಲ್ಲಿ ಸಹಾಯ ಮಾಡಲು ಸಿದ್ಧವಿರುವ ಇತರ ದೇಶಗಳೊಂದಿಗೆ ಶಾಶ್ವತ ಪಾಲುದಾರಿಕೆಯನ್ನು ಕಂಡುಕೊಳ್ಳುವುದು ಕೂಡ ಪರಿಹಾರದ ಮಾರ್ಗವಾದೀತು. ಭಾರತವು ಚೀನಾ ಅಥವಾ ಅಮೆರಿಕದ ಮೇಲೆ ಅವಲಂಬನೆಯನ್ನು ಸೃಷ್ಟಿಸಿಕೊಳ್ಳುವುದರ ಬಗ್ಗೆ ಎಚ್ಚರದಿಂದಿರಬೇಕು ಎಂದು ವಾಧ್ವಾ ಎಚ್ಚರಿಸುತ್ತಾರೆ.
ಆದರೂ ಎಲ್ಲವೂ ನಿರಾಶಾದಾಯಕವಾಗಿಲ್ಲ. ಅನೇಕ ಭಾರತೀಯ ಮತ್ತು ಅಮೆರಿಕದ ಕಾರ್ಯತಂತ್ರಜ್ಞರು ಆಶಾವಾದಿಗಳಾಗಿದ್ದಾರೆ. ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳಂತೆ, ಅಮೆರಿಕದ ನೀತಿಗಳು ಪ್ರತಿ ಚುನಾವಣಾ ಚಕ್ರದೊಂದಿಗೆ ವಿಕಸನಗೊಳ್ಳುತ್ತವೆ. ಆದರೆ ಬದಲಾಗುವುದಕ್ಕಿಂತ ಸ್ಥಿರವಾಗಿರುವುದೇ ಹೆಚ್ಚು ಪ್ರಭಾವಶಾಲಿಯಾಗಿದೆ. ಇವು ಗಟ್ಟಿ ಬುನಾದಿಗಳಾಗಿವೆ ಮತ್ತು ನಿರಂತರ ಸಂಪರ್ಕವು ಬಾಂಧವ್ಯವನ್ನು ಮತ್ತಷ್ಟು ಗಾಢವಾಗಿಸುತ್ತದೆ ಎಂಬ ವಿಶ್ವಾಸಕ್ಕೆ ಎಲ್ಲ ಕಾರಣಗಳಿವೆ ಎಂದು ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್ನ್ಯಾಷನಲ್ ಸ್ಟಡೀಸ್ (CSIS) ನ ಭಾರತ ಮತ್ತು ಉದಯೋನ್ಮುಖ ಏಷ್ಯಾ ಅರ್ಥಶಾಸ್ತ್ರದ ಸಹಾಯಕ ಫೆಲೋ ಆರ್ಯನ್ ಡಿ'ಸೊಜಾ ಹೇಳುತ್ತಾರೆ.
ಆದರೆ ಊಹೆಗಳು ಈಗಾಗಲೇ ದುಬಾರಿ ಎಂಬುದು ಸಾಬೀತಾಗಿವೆ. ಮುಂದಿನ ಆಡಳಿತವು ಸರಳವಾಗಿ ಹಳೆಯ ಸಾಮಾನ್ಯ ಸ್ಥಿತಿಯನ್ನು ಮರುಸ್ಥಾಪಿಸುತ್ತದೆ ಎಂಬ ನಿರೀಕ್ಷೆಯ ಮೇಲೆ ಭಾರತವು ತನ್ನ ಅಮೆರಿಕದ ಕಾರ್ಯತಂತ್ರವನ್ನು ಇನ್ನುಮುಂದೆ ನಿರ್ಮಿಸಲು ಸಾಧ್ಯವಿಲ್ಲ ಎಂಬುದು ಕಳೆದ ವರ್ಷ ಕಲಿತ ಪಾಠವಾಗಿದೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

