ಜೈಪುರ ಜುಲೈ 07: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಮಂಗಳವಾರ ಮುಂಜಾನೆ ಅತ್ಯಂತ ಕರಳು ಹಿಂಡುವ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಅತಿವೇಗವಾಗಿ ಬಂದ ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ಫುಟ್ಪಾತ್ ಮೇಲೆ ಕುಳಿತಿದ್ದ ಕುಟುಂಬದ ಮೇಲೆ ಹರಿದ ಪರಿಣಾಮ, ತಂದೆ ಹಾಗೂ ಅವರ ಮೂವರು ಅಪ್ರಾಪ್ತ ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚಂದ್ರಪ್ರಕಾಶ್ ಅವರು ತಮ್ಮ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಜೈತ್ಪುರಕ್ಕೆ ತೆರಳಲು ವಾಹನಕ್ಕಾಗಿ ಫುಟ್ಪಾತ್ ಮೇಲೆ ಕುಳಿತು ಕಾಯುತ್ತಿದ್ದರು. ಈ ವೇಳೆ ವಿರುದ್ಧ ದಿಕ್ಕಿನಿಂದ ಅತಿವೇಗ ಹಾಗೂ ಬೇಜವಾಬ್ದಾರಿಯಿಂದ ಬಂದ ಟ್ರೇಲರ್ (ಟಿಪ್ಪರ್) ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಫುಟ್ಪಾತ್ಗೆ ನುಗ್ಗಿ ಐವರ ಮೇಲೂ ಚಲಿಸಿದೆ.ಅಪಘಾತದ ಬೆನ್ನಲ್ಲೇ ಟಿಪ್ಪರ್ ಚಾಲಕ ವಾಹನವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಶ್ಯಾಮ್ ನಗರ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪರಾರಿಯಾದ ಚಾಲಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

