Dailyhunt
West Bengal: ಮಶ್ಚಿಮ ಬಂಗಾಳದಲ್ಲಿ ಮತ್ತೆ ಹರಿಯಿತು ರಕ್ತ; ದೀದಿ ವಿರುದ್ಧ ಗೆದ್ದಿದ್ದ ಸುವೇಂದು ಅಧಿಕಾರಿ PA ಹತ್ಯೆ

West Bengal: ಮಶ್ಚಿಮ ಬಂಗಾಳದಲ್ಲಿ ಮತ್ತೆ ಹರಿಯಿತು ರಕ್ತ; ದೀದಿ ವಿರುದ್ಧ ಗೆದ್ದಿದ್ದ ಸುವೇಂದು ಅಧಿಕಾರಿ PA ಹತ್ಯೆ

TimesNowSuddi 1 week ago

ಕೋಲ್ಕತ್ತ: ಈ ಬಾರಿ ಪಶ್ಚಿಮ ಬಂಗಾಳ ಮತದಾನವಾಗಲೀ, ಮತ ಎಣಿಕೆಯಾಗಲೀ ಯಾವುದೇ ದೊಡ್ಡಮಟ್ಟದ ಗಲಭೆ, ಗಲಾಟೆ ಇಲ್ಲದೆ ಮುಕ್ತಾಯವಾಗಿತ್ತು. ಇದೊಂಥರ ಆಶ್ಚರ್ಯವನ್ನೂ ಉಂಟು ಮಾಡಿತ್ತು. ಈ ಸಲ ಗಲಾಟೆಯಾಗಿಲ್ಲ, ಗಲಭೆಯಾಗಿಲ್ಲ ಎಂಬಿತ್ಯಾದಿ ಸಮಾಧಾನ ಇತ್ತು. ಆದರೆ, ಈಗ ಮತ್ತದೇ ರಕ್ತದೋಕುಳಿಯಾಗಿದೆ.

ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಗೆದ್ದಿರುವ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಅವರ ಪರ್ಸನಲ್‌ ಅಸಿಸ್ಟಂಟ್‌ ಚಂದ್ರನಾಥ್‌ ರಾಥ್‌ ಅವರನ್ನ ಹತ್ಯೆ ಮಾಡಲಾಗಿದೆ. ಮಧ್ಯಮಗ್ರಾಮ್‌ನಲ್ಲಿ ಅವರಿಗೆ ಗುಂಡಿಟ್ಟು ಕೊಲ್ಲಲಾಗಿದೆ. ಚಂದ್ರನಾಥ್‌ ಚಲಿಸುತ್ತಿದ್ದ ಕಾರಲ್ಲಿ ಇದ್ದಾಗಲೇ, ಅವರ ದೇಹವನ್ನ ಮೂರ್ನಾಲ್ಕು ಬುಲೆಟ್‌ಗಳು ಹೊಕ್ಕಿವೆ. ಕಾರು ಚಲಿಸುತ್ತಿತ್ತು..ದುಷ್ಕರ್ಮಿಗಳು ಕಾಯುತ್ತಿದ್ದರು. ಯಾವಾಗ ಅವರ ಕಾರು ಸ್ವಲ್ಪ ನಿಧಾನವಾಯಿತೋ..ಆಗಲೇ ಗುಂಡು ಹೊಡೆದಿದ್ದಾರೆ. ಅಂದಹಾಗೇ, ಇವರೆಲ್ಲ ಬೈಕ್‌ನಲ್ಲಿ ಬಂದು, ಚಂದ್ರನಾಥ್‌ ಹತ್ಯೆ ಮಾಡಿ ಹೋಗಿದ್ದಾರೆ.

ಚಂದ್ರನಾಥ್‌ ಮೇಲೆ ದಾಳಿ ಆದ ವಿಡಿಯೊಗಳು ಸಾಕಷ್ಟು ವೈರಲ್‌ ಆಗುತ್ತಿವೆ. ಅದರಲ್ಲಿ ಕಾರಿನ ಎಡಭಾಗದ ಮುಂದಿನ ಗ್ಲಾಸ್‌ ಸಂಪೂರ್ಣವಾಗಿ ಒಡೆದು ಹೋಗಿದೆ. ಬುಲೆಟ್‌ಗಳು ಬಿದ್ದ ಹೋಲ್‌ ಆಗಿದೆ. ಅತ್ಯಂತ ಭಯಾನಕವಾಗಿ ಈ ದಾಳಿ ಮಾಡಲಾಗಿದೆ. ಚಂದ್ರನಾಥ್‌ ರಾಥ್‌ ಅವರು ಸುವೇಂದು ಅಧಿಕಾರಿ ಅವರೊಂದಿಗೆ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಅವರ ರಾಜಕೀಯಕ್ಕೆ ಸಂಬಂಧಪಟ್ಟ ಬಹುತೇಕ ಕೆಲಸಗಳನ್ನ ಮಾಡುತ್ತಿದ್ದಾರೆ. ಸುವೇಂದು ಅಧಿಕಾರಿ ಅವರ ಆಪ್ತವಲಯದಲ್ಲಿ ಮುಂಚೂಣಿಯಲ್ಲಿ ಇದ್ದರು. ಆಪ್ತ ಕಾರ್ಯದರ್ಶಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆ ಸುವೇಂದು ಅಧಿಕಾರಿ ಅವರು ಮಧ್ಯಗ್ರಾಮದಲ್ಲಿರುವ ಆಸ್ಪತ್ರೆಗೆ ದೌಡಾಯಿಸಿದ್ದರು. ಇನ್ನು ಈ ದಾಳಿಯಲ್ಲಿ ಚಂದ್ರನಾಥ್‌ ಅವರ ವಾಹನ ಚಾಲಕ ಬುದ್ಧದೇಬ್‌ ಕೂಡ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಪಾಕ್‌ ಉಗ್ರರ ಹುಟ್ಟಡಗಿಸಿದ್ದ ʼಆಪರೇಷನ್‌ ಸಿಂದೂರ್‌ʼಗೆ ಒಂದು ವರ್ಷ; ʼಗಡಿ ದಾಟುವ ಮುನ್ನ ಎಚ್ಚರ..ʼ

ದಾಳಿ ನಡೆದ ಸಂದರ್ಭದಲ್ಲಿ ಸುವೇಂದು ಅಧಿಕಾರಿ ಅವರು ತಮ್ಮ ಪಿಎ ಚಂದ್ರನಾಥ್‌ ಜೊತೆ ಇರಲಿಲ್ಲ. ಈ ಹತ್ಯೆ ಪ್ರಕರಣವನ್ನ ಸಿಬಿಐ ತನಿಖೆ ನಡೆಸಬೇಕು ಎಂದು ಸುವೇಂದು ಅಧಿಕಾರಿ ಸಹೋದರ ದಿವೇಂದು ಅಧಿಕಾರಿ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲ, ಈ ದಾಳಿಯ ಹಿಂದೆ ತೃಣಮೂಲ ಕಾಂಗ್ರೆಸ್‌ ಕೈವಾಡ ಇದ್ದೇ ಇದೆ ಎಂದು ನೇರವಾಗಿ ಆರೋಪ ಮಾಡಿದ್ದಾರೆ.

ತಲೆಕೆಳಗಾದ ಫಲಿತಾಂಶ

ಬಿಜೆಪಿ ಎಲ್ಲ ಕಡೆಗಳಲ್ಲಿ ತನ್ನ ಪ್ರಾಬಲ್ಯ ಸಾಧಿಸುತ್ತಿದ್ದರೂ, ಪಶ್ಚಿಮ ಬಂಗಾಳದಲ್ಲಿ ಸಾಧ್ಯವೇ ಇರಲಿಲ್ಲ. ಇಲ್ಲಿ ಮಮತಾ ಬ್ಯಾನರ್ಜಿ ಎದುರು ಯಾವಾಗಲೂ ಸೋಲುತ್ತಿತ್ತು. ಆದರೆ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಚುನಾವಣೆ ಫಲಿತಾಂಶ ತಲೆಕೆಳಗಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. 294 ಕ್ಷೇತ್ರಗಳಲ್ಲಿ 206 ಕ್ಷೇತ್ರಗಳನ್ನ ಗೆದ್ದುಕೊಂಡಿದೆ. ಅದಾದ ಮೇಲೆ ಮತ್ತೆ ಹಿಂಸಾಚಾರ ಶುರುವಾಗಿದೆ. 2011ರಿಂದಲೂ ಆಡಳಿತ ನಡೆಸುತ್ತಿದ್ದ ದೀದಿ ಈ ಬಾರಿ ಸೋತಿದ್ದಾರೆ. ಆದರೆ ತಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡೋದಿಲ್ಲ. ಬೇಕಿದ್ದರೆ ಕೇಂದ್ರ ಸರ್ಕಾರವೇ ತನ್ನನ್ನ ವಜಾಗೊಳಿಸಲಿ ಎಂದು ಹೇಳಿದ್ದಾರೆ. ಆದರೆ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಬಳಿಕ ನಡೆಯುತ್ತಿರುವ ಹಿಂಸಾಚಾರದಲ್ಲಿ ಇದುವರೆಗೆ 4 ಮಂದಿ ಮೃತಪಟ್ಟಿದ್ದಾರೆ. ಫಲಿತಾಂಶದ ಬಳಿಕ ಬಿಜೆಪಿ ಮತ್ತು ಟಿಎಂಸಿ ಪಕ್ಷಗಳ ಕಾರ್ಯಕರ್ತರ ನಡುವೆ ನಿರಂತರವಾಗಿ ಸಂಘರ್ಷಗಳು ನಡೆಯುತ್ತಲೇ ಇವೆ. ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ ಎಂದು ಟಿಎಂಸಿ ಆರೋಪಿಸಿದೆ.

Read more news like this on kannada.timesnownews.com

Dailyhunt
Disclaimer: This content has not been generated, created or edited by Dailyhunt. Publisher: TimesNowSuddi