ಬೆಂಗಳೂರು: ಕಳೆದ 3 ವರ್ಷಗಳಲ್ಲಿ ಮೆಟ್ರೋ ರೈಲು ಸೇವೆಯಲ್ಲಿ ಆಗಿರುವ ಅಡಚಣೆಗಳ ಬಗ್ಗೆ ತನಿಖೆ ನಡೆಸಿ, ತೆಗೆದುಕೊಂಡ ಸರಿಪಡಿಸುವ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿ. (ಬಿಎಂಆರ್ ಸಿಎಲ್) ಸಂಸ್ಥೆಗೆ ರೈಲು ಸುರಕ್ಷತಾ ಮುಖ್ಯ ಆಯುಕ್ತರು ನಿರ್ದೇಶನ ನೀಡಿದ್ದಾರೆ.
ಈ ಕುರಿತು ವರದಿ ಸಲ್ಲಿಸಲು ಬಿಎಂಆರ್ ಸಿಎಲ್ ಎಂಡಿಗೆ ಈಗಾಗಲೇ ಸೂಚಿಸಲಾಗಿದೆ. ಇದಲ್ಲದೆ, ಮೆಟ್ರೋ ರೈಲ್ವೆ ವ್ಯವಸ್ಥೆಗಳ ಕಾರ್ಯಾಚರಣೆ ಮತ್ತು ನಿರ್ವಹಣಾ ಅಂಶಗಳ ಪರಿಣಾಮಕಾರಿತ್ವದ ಲೆಕ್ಕಪರಿಶೋಧನೆಗೆ ಸೂಚಿಸಲಾಗಿದೆ.
ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ, 2002ರ ಪ್ರಕಾರ, ಮಾನವ ಜೀವಹಾನಿ ಅಥವಾ ಗಂಭೀರ ಗಾಯದ ಅಪ ಘಾತಗಳ ಬಗ್ಗೆ ಆಯುಕ್ತರು ತನಿಖೆ ನಡೆಸ ಬೇಕು. ಮೆಟ್ರೋ ರೈಲ್ವೆ ವ್ಯವಸ್ಥೆಯ ಸುರಕ್ಷಿತ ಮತ್ತು ವಿಶ್ವಾಸಾರ್ಹ ಕಾರ್ಯನಿರ್ವಹಣೆಗಾಗಿ ದಿನನಿತ್ಯದ ಕಾರ್ಯಾಚರಣೆ ಮತ್ತು ನಿರ್ವಹಣೆ ಮೆಟ್ರೋ ರೈಲ್ವೆ ಆಡಳಿತದ ಜವಾಬ್ದಾರಿಯಾಗಿ ಉಳಿದಿದೆ ಎಂದು ರೈಲು ಸುರಕ್ಷತಾ ಮುಖ್ಯ ಆಯುಕ್ತರು ಬಿಎಂಆರ್ ಸಿಎಲ್ಗೆ ತಿಳಿಸಿದ್ದಾರೆ.
ಪತ್ರ ಬರೆದಿದ್ದ ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ ಅವರು 2024 ಜನವರಿಯಿಂದ 20 ಬಾರಿ ಬೆಂಗಳೂರಿನ ನಮ್ಮ ಮೆಟ್ರೋ ಸೇವೆಯಲ್ಲಿ ಅಡಚಣೆ ಉಂಟಾಗಿರುವ ಬಗ್ಗೆ ರೈಲು ಸುರಕ್ಷತಾ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದರು. ಅನ್ನು ಪರಿಗಣಿಸಿರುವ ಆಯುಕ್ತರು, ಈ ಬಗ್ಗೆ ಬಿಎಂಆರ್ಸಿಎಲ್ ಅವರಿಂದ ವರದಿ ಕೇಳಿರುವುದಾಗಿ ತೇಜಸ್ವಿ ಸೂರ್ಯಗೆ ತಿಳಿಸಿದ್ದಾರೆ. ಈ ಮಾಹಿತಿಯನ್ನು ಸಂಸದ ತೇಜಸ್ವಿ ಸೂರ್ಯ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲತೆ ಬಿಎಂಆರ್ಸಿಎಲ್ನ ಆದ್ಯತೆಯಾಗಿರಬೇಕು. ರಾಜ್ಯ ಸರ್ಕಾರವು ಇದನ್ನು ಅರ್ಹವಾದ ತುರ್ತುಸ್ಥಿತಿಯೊಂದಿಗೆ ಪರಿಗಣಿಸಬೇಕು ಎಂದು ತಿಳಿಸಿದ್ದಾರೆ.

