Saturday, 24 Apr, 10.20 pm ಉದಯವಾಣಿ

ಟಾಪ್ 10 ಸುದ್ದಿ
ಆಕ್ಸಿಜನ್ ಅಭಾವ : ದಿಲ್ಲಿ, ಪಂಜಾಬ್‌, ಮಹಾರಾಷ್ಟ್ರದ ಆಸ್ಪತ್ರೆಗಳಲ್ಲಿ ಮತ್ತೆ 33 ಮಂದಿ ಸಾವು

ಹೊಸದಿಲ್ಲಿ : ಪ್ರಾಣವಾಯುವಿನ ಅಭಾವದಿಂದ ಆಸ್ಪತ್ರೆಗಳಲ್ಲಿ ಸ್ಥಿತಿ ಕೈಮೀರಿ ಹೋಗುತ್ತಿದ್ದು, ಆಮ್ಲಜನಕ ಸಿಗದೆ ಶನಿವಾರ ಮತ್ತೆ 33 ಮಂದಿ ಅಸುನೀಗಿದ್ದಾರೆ.

ದಿಲ್ಲಿಯ ಜೈಪುರ ಗೋಲ್ಡನ್‌ ಆಸ್ಪತ್ರೆಯಲ್ಲಿ 25 ಮಂದಿ, ಪಂಜಾಬ್‌ನ ಅಮೃತಸರದ ಖಾಸಗಿ ಆಸ್ಪತ್ರೆಯಲ್ಲಿ 6 ರೋಗಿಗಳು ಸಾವಿಗೀಡಾಗಿದ್ದಾರೆ. ಗೋಲ್ಡನ್‌ ಆಸ್ಪತ್ರೆಗೆ ಸರಕಾರವು ಕಳುಹಿಸಿದ್ದ 3.5 ಮೆ. ಟನ್‌ ಆಮ್ಲಜನಕ ಶುಕ್ರವಾರ ಸಂಜೆ 5ಕ್ಕೆ ತಲುಪಬೇಕಿತ್ತು. ಆದರೆ ಟ್ಯಾಂಕರ್‌ ತಲುಪುವಾಗ ಮಧ್ಯರಾತ್ರಿಯಾಗಿದ್ದು, ಅಷ್ಟರಲ್ಲಿ ಆಮ್ಲಜನಕ ಖಾಲಿಯಾಗಿ 25 ಮಂದಿ ಅಸುನೀಗಿದರು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಇಬ್ಬರ ಸಾವು
ಬೀಡ್‌ ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ಅಪರಿಚಿತ ದುಷ್ಕರ್ಮಿಯು ರೋಗಿಗಳಿಗೆ ಆಮ್ಲಜನಕ ಪೂರೈಕೆಯಾಗುತ್ತಿದ್ದ ಸಿಲಿಂಡರ್‌ನ ತೆರಪನ್ನು ಬಂದ್‌ ಮಾಡಿದ ಕಾರಣ ಇಬ್ಬರು ಅಸುನೀಗಿದ್ದಾರೆ.

“ಆಮ್ಲಜನಕ ಪೂರೈಕೆಗೆ ಅಡ್ಡಿ ಮಾಡಿದರೆ ಗಲ್ಲಿಗೆ’ ಇದು “ಅಲೆ’ ಅಲ್ಲ, “ಸುನಾಮಿ’: ದಿಲ್ಲಿ ಹೈಕೋರ್ಟ್‌
ಆಮ್ಲಜನಕ ಪೂರೈಕೆಗೆ ಯಾರಾದರೂ ಅಡ್ಡಿಪಡಿಸಿದ್ದು ಗೊತ್ತಾದರೆ ಅಂಥವರನ್ನು ಗಲ್ಲಿಗೇರಿಸುತ್ತೇವೆ. ಇಂಥ ಸಂಕಷ್ಟದ ಸಮಯವನ್ನು ದುರ್ಬಳಕೆ ಮಾಡಿಕೊಂಡ ಯಾರನ್ನೂ ನಾವು ಸುಮ್ಮನೆ ಬಿಡುವುದಿಲ್ಲ…
-ಇದು ದಿಲ್ಲಿ ಹೈಕೋರ್ಟ್‌ ಶನಿವಾರ ನೀಡಿದ ಕಠಿನ ಎಚ್ಚರಿಕೆ. ದಿಲ್ಲಿಯಲ್ಲಿ ಆಕ್ಸಿಜನ್‌ ಕೊರತೆ ಕುರಿತು ಆಸ್ಪತ್ರೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ, ಈ ರೀತಿ ಆಕ್ರೋಶ ವ್ಯಕ್ತಪಡಿಸಿದೆ. ಜತೆಗೆ ಈಗ ಇರುವುದು ಕೊರೊನಾ “ಅಲೆ’ ಅಲ್ಲ, “ಸುನಾಮಿ’ ಎಂದೂ ಬಣ್ಣಿಸಿದೆ.

ಇದನ್ನೂ ಓದಿ :ಅಮೆರಿಕನ್‌ ಎಕ್ಸ್‌ಪ್ರೆಸ್‌ ಮತ್ತು ಡೈನರ್ಸ್‌ ಕ್ಲಬ್‌ ಕಾರ್ಡ್‌ಗಳ ಮಾರಾಟಕ್ಕೆ RBI ಕಡಿವಾಣ

ದಿಲ್ಲಿಗೆ ದಿನಕ್ಕೆ 480 ಮೆ.ಟನ್‌ ಆಮ್ಲಜನಕ ಸಿಗದಿದ್ದರೆ ಇಡೀ ವ್ಯವಸ್ಥೆ ಕುಸಿದುಬೀಳಲಿದೆ. ಇದಕ್ಕೆ ಕಳೆದೆರಡು ದಿನಗಳಲ್ಲಿ ನಡೆದ ದುರಂತಗಳೇ ಸಾಕ್ಷಿ ಎಂದು ಕೇಜ್ರಿವಾಲ್‌ ಸರಕಾರ ಕೋರ್ಟ್‌ಗೆ ಮಾಹಿತಿ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಈ ರೀತಿ ತೀವ್ರ ಎಚ್ಚರಿಕೆ ನೀಡಿದೆ. ಅಂಥ ಅಧಿಕಾರಿಗಳು ಅಥವಾ ವ್ಯಕ್ತಿಗಳ ಕುರಿತು ಕೇಂದ್ರ ಸರಕಾರಕ್ಕೂ ಮಾಹಿತಿ ನೀಡಿ, ಸರಕಾರವೂ ಕ್ರಮ ಕೈಗೊಳ್ಳಲಿ ಎಂದಿತು.

ಮೇ ಮಧ್ಯಭಾಗದಲ್ಲಿ ಸೋಂಕು ಉತ್ತುಂಗಕ್ಕೇರಲಿದ್ದು, ಏನೆಲ್ಲ ತಯಾರಿ ಮಾಡಿಕೊಂಡಿದ್ದೀರಿ ಎಂದು ಕೇಂದ್ರ ಸರಕಾರವನ್ನು ಹೈಕೋರ್ಟ್‌ ಪ್ರಶ್ನಿಸಿದೆ. ಪ್ರತಿಕ್ರಿಯಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಪ್ರಧಾನಿ ಮೋದಿ ಸಹಿತ ಎಲ್ಲರೂ ಸೋಂಕು ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಆಮ್ಲಜನಕ ಆಮದಿಗೂ ನಿರ್ಧರಿಸಲಾಗಿದೆ ಎಂದಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top