ನ್ಯೂಯಾರ್ಕ್: ಕಳೆದ ವರ್ಷ ನವೆಂಬರ್ನಲ್ಲಿ ದೆಹಲಿಯ ಕೆಂಪು ಕೋಟೆ ಪ್ರದೇಶದಲ್ಲಿ ಸಂಭವಿಸಿದ್ದ ಭೀಕರ ಉಗ್ರರ ದಾಳಿಯನ್ನು ಈಗ ಅಧಿಕೃತವಾಗಿ ಅಲ್-ಖೈದಾ (ಎಕ್ಯೂಐಎಸ್) ಸಂಘಟನೆಯೇ ಮಾಡಿದೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿಯ ಸಂಚಾರ ದ್ವೀಪದಲ್ಲಿ ನಿಧಾನವಾಗಿ ಸಾಗುತ್ತಿದ್ದ ಕಾರಿನಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಿಂದ ಸುಮಾರು 15 ಜನರು ಸಾವನ್ನಪ್ಪಿದ್ದರು ಮತ್ತು ಹಲವರು ಗಾಯಗೊಂಡಿದ್ದರು.
ಈ ಕುರಿತು ಐಎಸ್ಐಎಲ್ ಮತ್ತು ಅಲ್-ಖೈದಾ ಕುರಿತಾದ ಭದ್ರತಾ ಮಂಡಳಿಯ 1267 ನಿರ್ಬಂಧ ಸಮಿತಿಗೆ ಸಲ್ಲಿಸಲಾದ ವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧ ಮೇಲ್ವಿಚಾರಣಾ ತಂಡದ 38 ನೇ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.
ಸೋಮವಾರ ಪ್ರಕಟವಾದ ಈ ವರದಿಯ ಪ್ರಕಾರ, ಅಲ್- ಖೈದಾ ಕೇವಲ ವಿಭಜಿತ ಗುಂಪಾಗಷ್ಟೇ ಉಳಿಯದೆ, ವಲಯ ಮಟ್ಟದ ಭಯೋತ್ಪಾದಕ ಸಂಘಟನೆಯಾಗಿ ರೂಪಗೊಳ್ಳುತ್ತಿದೆ. ದೊಡ್ಡ ಘಟಕಗಳ ಬದಲಿಗೆ ವಿಕೇಂದ್ರೀಕೃತ ಸಣ್ಣ ಗುಂಪುಗಳ ಮೂಲಕ ಲಾಜಿಸ್ಟಿಕ್ಸ್ ಮತ್ತು ಹಣಕಾಸು ಜಾಲವನ್ನು ಅದು ಸ್ಥಾಪಿಸಿದೆ. ಬಾಂಗ್ಲಾದೇಶದಲ್ಲೂ ತನ್ನ ನೆಲೆಗಳನ್ನು ಸ್ಥಾಪಿಸಲು ಅಲ್-ಖೈದಾ ಯತ್ನಿಸುತ್ತಿರುವುದು ಕಳವಳಕಾರಿಯಾಗಿದೆ ಎಂದೂ ವರದಿ ಎಚ್ಚರಿಸಿದೆ.

