ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಳೆ ರಭಸಕ್ಕೆ ಮಂಗಳವಾರ (ಜು.07) ರಾತ್ರಿ ಅಂಬೋಲಿ ಘಾಟ್ ಬಳಿ ಗುಡ್ಡ ಕುಸಿತವಾಗಿದೆ. ಸ್ವಲ್ಪದರಲ್ಲೇ ಬಸ್ ಹಾಗೂ ಕಾರು ಪಾರಾಗಿವೆ.
ಬೆಳಗಾವಿ-ವೆಂಗುರ್ಲಾ ರಾಜ್ಯ ಹೆದ್ದಾರಿ ಮೇಲೆಯೇ ಬಂಡೆಗಲ್ಲುಗಳು ಉರುಳಿ ಬಿದ್ದಿವೆ.
ಮಹಾರಾಷ್ಟ್ರ ಸಾರಿಗೆ ಬಸ್, ಕಾರು ದಾಟುವ ವೇಳೆಯಲ್ಲಿಯೇ ರಸ್ತೆಗೆ ಬೃಹತ್ ಬಂಡೆಗಲ್ಲುಗಳು ಬಿದ್ದಿವೆ. ಕೂದಲಳತೆ ಅಂತರದಲ್ಲೇ ಬಸ್ ಹಾಗೂ ಕಾರು ಬಚಾವಾಗಿವೆ. ಇದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.
ಸ್ಥಳಕ್ಕೆ ಕೂಡಲೇ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದರು. ನಂತರ ಕೆಲ ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಜೆಸಿಬಿಗಳ ಮೂಲಕ ಬಂಡೆಗಲ್ಲು ತೆರವು ಕಾರ್ಯಾಚರಣೆ ನಡೆಸಲಾಯಿತು. ಪಶ್ಚಿಮ ಘಟ್ಟದಲ್ಲಿ ಮಳೆಯ ಅಬ್ಬರಕ್ಕೆ ಭೂಕುಸಿತ ಭೀತಿ ಸಂಭವಿಸಿದೆ. ಹೀಗಾಗಿ ಅಂಬೋಲಿ ಘಾಟ್ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಎಚ್ಚರಿಕೆಯಿಂದ ಸಂಚರಿಸುವಂತೆ ಮಹಾರಾಷ್ಟ್ರ ಸರ್ಕಾರ ಸೂಚನೆ ನೀಡಿದೆ.
ಮಳೆಗಾಲ ಆರಂಭವಾಯಿತೆಂದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಅಂಬೋಲಿ ಫಾಲ್ಸ್ ನೋಡಲು ತೆರಳುತ್ತಿದ್ದರು. ಆದರೆ ಈಗ ಗುಡ್ಡ ಕುಸಿತ ಆಗಿರುವುದು ಪ್ರವಾಸಿಗರಲ್ಲಿ ಆತಂಕ ಉಂಟು ಮಾಡಿದೆ.

