ಬದಿಯಡ್ಕ: ಕನ್ಯಪ್ಪಾಡಿಯ ಅಂಗಡಿ ಜಗಲಿಯಲ್ಲಿ ಮಲಗಿದ್ದ ಹಸುವನ್ನು ಕಳವುಗೈದು ಕಾರಿನಲ್ಲಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಜೋಕಟ್ಟೆ ಬಜ್ಪೆಯ ರಾಸಿಕ್ (21) ಮತ್ತು ಉಳ್ಳಾಲ ಅಳಿಕೆಯ ಮುಹಮ್ಮದ್ ಇಬ್ರಾಸ್ (26)ನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಜೂ.16 ರಂದು ಮಧ್ಯರಾತ್ರಿ ಕನ್ಯಪ್ಪಾಡಿ ರಹ್ಮತ್ ಮಂಜಿಲ್ನ ಕೆ.ಎಂ.ಮುಹಮ್ಮದ್ ಅವರ ಮನೆಯ ಮುಂಭಾಗದಲ್ಲಿರುವ ಅಂಗಡಿಯ ಜಗಲಿಯಲ್ಲಿ ಮಲಗಿದ್ದ ಹಸುವನ್ನು ಆರೋಪಿಗಳು ಕಳವು ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಮನೆಯ ಸಿ.ಸಿ. ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಹಸುವನ್ನು ಕಾರಿನಲ್ಲಿ ಸಾಗಿಸಿರುವುದು ಕಂಡು ಬಂತು. ಈ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಯಿತು. ಇನ್ಸ್ಪೆಕ್ಟರ್ ಅನೂಪ್ ಕೃಷ್ಣ ಅವರ ಮಾರ್ಗದರ್ಶನದಲ್ಲಿ ಎಎಸ್ಐ ಪ್ರಸಾದ್ ಅವರ ನೇತೃತ್ವದಲ್ಲಿ ಮಂಗಳೂರು ನಗರದಿಂದ ಇವರನ್ನು ಬಂಧಿಸಿದರು.
ಹಸುವನ್ನು ಉಳ್ಳಾಲದ ಕಸಾಯಿಖಾನೆಗೆ ಮಾರಾಟ ನಡೆಸಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

