Dailyhunt Logo
  • Light mode
    Follow system
    Dark mode
    • Play Story
    • App Story
ಬೆಂಗಳೂರಿನಲ್ಲಿ ಆ.15ರಂದು ʼವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ'

ಬೆಂಗಳೂರಿನಲ್ಲಿ ಆ.15ರಂದು ʼವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ'

ಬೆಂಗಳೂರು: ರಾಜಧಾನಿ ಬೆಂಗಳೂರಿನ ʼಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.)ʼ ಪ್ರತಿ ವರ್ಷ ಆಚರಿಸುತ್ತಿರುವ ʼವಿಶ್ವ ಕುಂದಾಪ್ರ ಕನ್ನಡ ದಿನʼ ಬೆಂಗಳೂರಿನಲ್ಲಿ ಈ ಸಲ ಆಗಸ್ಟ್ 15ರ ಶನಿವಾರ ನಡೆಯಲಿದೆ.

ʼವಿಶ್ವ ಕುಂದಾಪ್ರ ಕನ್ನಡ ದಿನ'ದ ಪ್ರಯುಕ್ತ ಬೆಂಗಳೂರಿನ ವಿಜಯನಗರದ ಬಂಟರ ಸಂಘದ ಸಭಾಂಗಣದಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆಯಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ದೀಪಕ್ ಶೆಟ್ಟಿ ಬಾರ್ಕೂರು ತಿಳಿಸಿದ್ದಾರೆ.

ಬೃಹತ್ ಘೋಷಣೆ

ವಿಶ್ವ ಕುಂದಾಪ್ರ ಕನ್ನಡ ದಿನದ ಕುರಿತು ಆ.15ರ ಕಾರ್ಯಕ್ರಮ ಬರೀ ಟ್ರೇಲರ್, ಪಿಚ್ಚರ್ ಅಭಿ ಬಾಕಿ ಹೈ ಎಂಬುದಾಗಿ ಕುಂದಾಪ್ರ ಕನ್ನಡ ಪ್ರತಿಷ್ಠಾನದವರು ತಿಳಿಸಿದ್ದಾರೆ. ಮುಂದಿನ ಅದ್ದೂರಿ ಕಾರ್ಯಕ್ರಮದ ಕುರಿತು ಆ.15ರ ರಾಜಸಭೆಯಲ್ಲಿ ಅತಿಥಿಗಣ್ಯರ ಸಮ್ಮುಖದಲ್ಲಿ ಬೃಹತ್ ಘೋಷಣೆಯೊಂದನ್ನು ಮಾಡಲಾಗುವುದು. ಈ ಸಂದರ್ಭದಲ್ಲಿ ತಮ್ಮೆಲ್ಲರ ಉಪಸ್ಥಿತಿ ಸಂಭ್ರಮ- ಸಡಗರವನ್ನು ಹೆಚ್ಚಿಸಲಿದ್ದು, ತಾವೆಲ್ಲರೂ ಅತಿಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂಬುದಾಗಿ ಕುಂದಾಪ್ರ ಕನ್ನಡ ಪ್ರತಿಷ್ಠಾನ ಮನವಿ ಮಾಡಿಕೊಂಡಿದೆ.

ಶನಿವಾರದ ಸಮಾರಂಭದ ಮುಖ್ಯ ಅತಿಥಿಗಳು

ಕೆ.ಜಯಪ್ರಕಾಶ್ ಹೆಗ್ಡೆ, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ.

ಕೋಟ ಶ್ರೀನಿವಾಸ ಪೂಜಾರಿ, ಉಡುಪಿ-ಚಿಕ್ಕಮಗಳೂರು ಸಂಸದ.

ಪ್ರಮೋದ್ ಶೆಟ್ಟಿ: ಖ್ಯಾತ ಚಿತ್ರನಟ

ಏನಿದು ವಿಶ್ವ ಕುಂದಾಪ್ರ ಕನ್ನಡ ದಿನ?

ಆಸಾಡಿ ಅಮಾಸಿ/ ಆಟಿ ಅಮಾವಾಸ್ಯೆ (ಕರ್ಕಾಟಕ ಅಮಾವಾಸ್ಯೆ) ದಿನ ಕರಾವಳಿಗರಿಗೆ ಅತ್ಯಂತ ವಿಶೇಷವಾದದ್ದು. ಕಳೆದ ಏಳು ವರ್ಷಗಳಿಂದ ಪ್ರತಿ ವರ್ಷ ಈ ಕರ್ಕಾಟಕ ಅಮಾವಾಸ್ಯೆ ದಿನವನ್ನು ʼವಿಶ್ವ ಕುಂದಾಪ್ರ ಕನ್ನಡ ದಿನʼ ಎಂದು ಆಚರಣೆ ಮಾಡಲಾಗುತ್ತಿದ್ದು, ಈ ಸಲ ಆಗಸ್ಟ್ 12ರಂದು ಆಷಾಢ ಅಮಾವಾಸ್ಯೆ ಬಂದಿದೆ. ಅಂದು ಕುಂದಾಪುರ ಮುಂತಾದೆಡೆ ವಿಶೇಷವಾಗಿ ಈ ದಿನಾಚರಣೆ ನಡೆದಿದ್ದು, ಬೆಂಗಳೂರಿನಲ್ಲಿ ಆಗಸ್ಟ್ 15ರಂದು ವಿಜಯನಗರದ ಬಂಟರ ಸಂಘದಲ್ಲಿ ವಿಶ್ವ ಕುಂದಾಪುರ ಕನ್ನಡ ದಿನ ಪ್ರಯುಕ್ತ ಹಲವು ಕಾರ್ಯಕ್ರಮಗಳು ನಡೆಯಲಿವೆ.

ಶನಿವಾರದ ಕಾರ್ಯಕ್ರಮಗಳು

ಬಯಲಾಟ: ಬಂಟರ ಸಂಘದ ಆವರಣದಲ್ಲಿ ಹಗ್ಗ ಜಗ್ಗಾಟ ಹಾಗೂ ಇತರ ಗ್ರಾಮೀಣ ಆಟೋಟಗಳು.

ಮಂದ್ರ ಕಡಲು: ಮಾಧುರ್ಯಭರಿತ ಭಾವಗೀತೆಗಳ ಮಧುರ ಪ್ರಸ್ತುತಿ. ಗಾಯನ: ರಾಘವೇಂದ್ರ ಬೀಜಾಡಿ, ಸಾನ್ವಿ ಶೆಟ್ಟಿ, ವಾದ್ಯ ವೃಂದ: ಕೃಷ್ಣ ಉಡುಪ ಹಾಗೂ ಬಳಗ.

ಯುಗಳ ರಸಗವಳ: ಜೋಡು ಮುಮ್ಮೇಳ ಹಾಗೂ ಕೂಡು ಹಿಮ್ಮೇಳಗಳ ಸಮಾಗಮದ ಒಂದು ನೂತನ ಯಕ್ಷಗಾನ ಪ್ರಯೋಗ.

ಮಾರ್ಣ್‌ಕಟ್ಟೆ ಬ್ರಹ್ಮ, ಮಂದಾರ್ತಿ ಅಮ್ಮ: ಅರೆಹೊಳೆ ಪ್ರತಿಷ್ಠಾನದ ʼನಂದಗೋಕುಲʼ ಕಲಾವಿದರಿಂದ ಅಪರೂಪದ ನೃತ್ಯ ರೂಪಕ.

ಇಲ್ಕಾಣಿ ಕುಂದಾಪ್ರ: ನೀವು ಕಂಡೂ ಕಾಣದ ಕುಂದಾಪ್ರವನ್ನು ತೋರಿಸುವ ವಿಶೇಷ ಪ್ರಯತ್ನ.

ಮುಗಿದದ್ದು ಹಬ್ಬ ಮಾತ್ರ, ಹೋಳಿಗೆ ಅಲ್ಲ: ಕಳೆದ ವರ್ಷ ಕುಂದಾಪ್ರ ಕನ್ನಡ ಹಬ್ಬದ ತೇರು ಸಾಗಿಬಂದ ಹಾದಿ ಕುರಿತು ಒಂದು ಪಕ್ಷಿನೋಟ.

ಯಬ್ಯಾ ಸೌಂಡೇ: ಕುಂದಾಪ್ರ ಕನ್ನಡ ಡಿಜೆ ರಂಜು ಕುಂದಾಪುರ ಅವರಿಂದ ವಿಶೇಷ ಡಿಜೆ ಸಂಗೀತ ಕಾರ್ಯಕ್ರಮ.

ಖಾದ್ಯ ವೈವಿಧ್ಯ: ಕುಂದಾಪ್ರ ನೆಲಮೂಲದ ಬಹುಬಗೆಯ ತಿಂಡಿ-ತಿನಿಸುಗಳು ಹಾಗೂ ಊಟ.

ವ್ಯಾಪಾರ ಮೇಳ: ಕುಂದಾಪ್ರ ಭಾಷಿಕ ಪ್ರದೇಶದ ವಸ್ತು ವಿಶೇಷಗಳ ಮಾರಾಟ ಮಳಿಗೆಗಳು.

Dailyhunt
Disclaimer: This content has not been generated, created or edited by Dailyhunt. Publisher: Udayavani