Dailyhunt
ಬೆಂಗಳೂರು ಉಸ್ತುವಾರಿ ಸಿಎಂ ಬೊಮ್ಮಾಯಿ ಬಳಿಯೇ ಇರಲಿ: ಸಚಿವ ಸೋಮಶೇಖರ್

ಬೆಂಗಳೂರು ಉಸ್ತುವಾರಿ ಸಿಎಂ ಬೊಮ್ಮಾಯಿ ಬಳಿಯೇ ಇರಲಿ: ಸಚಿವ ಸೋಮಶೇಖರ್

ಬೆಂಗಳೂರು: ಯಾರು ಹಣಕಾಸಿನ ಖಾತೆ ಹೊಂದಿರುತ್ತಾರೋ ಅವರೇ ಬೆಂಗಳೂರು ಉಸ್ತುವಾರಿ ವಹಿಸಿಕೊಳ್ಳುವುದು ಒಳ್ಳೆಯದು. ಈಗ ಸಿಎಂ ಬಳಿಯೇ ಹಣಕಾಸು ಖಾತೆ ಇದೆ. ಹಾಗಾಗಿ ಅವರೇ ಬೆಂಗಳೂರು ಉಸ್ತುವಾರಿಯನ್ನೂ ವಹಿಸಿಕೊಂಡಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಬಳಿಯೇ ಬೆಂಗಳೂರು ಉಸ್ತುವಾರಿ ಇರಲಿ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಣ್ಣ ಹಾಗೂ ಆರ್.ಅಶೋಕ್ ಸ್ನೇಹಿತರು. ಹಾಗಾಗಿ ಅವರಿಬ್ಬರು ಆಗಾಗ ಕಿತ್ತಾಡುತ್ತಿರುತ್ತಾರೆ. ಅದನ್ನೆಲ್ಲಾ ಗಂಭೀರವಾಗಿ ಪರಿಗಣಿಸಬೇಡಿ. ನಮ್ಮಲ್ಲಿ ಯಾವುದೇ ಶೀತಲ ಸಮರವಿಲ್ಲ ಎಂದರು.

ನನಗೆ ಮೈಸೂರು, ಚಾಮರಾಜನಗರ ಜಿಲ್ಲೆ ಉಸ್ತುವಾರಿ ಕೊಟ್ಟಿದ್ದಾರೆ. ಹೆಚ್ಚುವರಿ ಉಸ್ತುವಾರಿ ಜವಾಬ್ದಾರಿ ಬೇಡವೆಂದು ಸಿಎಂ ಬೊಮ್ಮಾಯಿ ಬಳಿ ಹೇಳಿದ್ದೇನೆ. ಹೀಗಿರುವಾಗ ಬೆಂಗಳೂರು ಉಸ್ತುವಾರಿ ಬೇಕೆಂದು ಯಾಕೆ ಕೇಳಲಿ ಎಂದರು.

ಸೀನಿಯರ್ ಹೇಳಲಿ: ಉಪಚುನಾವಣಾ ಪ್ರಚಾರದ ವೇಳೆ ನಾಳೆಯಿಂದ ನಮ್ಮ ಆಟವೆಂಬ ಸಚಿವ ವಿ.ಸೋಮಣ್ಣ ಹೇಳಿಕೆ‌ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಎಸ್.ಟಿ ಸೋಮಶೇಖರ್, ಸೋಮಣ್ಣ ನಲ್ವತ್ತು ವರ್ಷದ ಹಿರಿಯರು. ಯಾವ ಹಿನ್ನೆಲೆಯಲ್ಲಿ ಹಾಗೆ ಹೇಳಿದ್ದಾರೆ ಗೊತ್ತಿಲ್ಲ. ನಾವೆಲ್ಲಾ ಇತ್ತೀಚೆಗೆ ಬಿಜೆಪಿಗೆ ಬಂದಿರುವುದು. ಯಾವ ಆಟ ಎನ್ನುವುದನ್ನು ಅವರೇ ಹೇಳಬೇಕು. ಸೀನಿಯರ್ ಅವರು ಹೇಳಿದರೆ ನಾವು ಕೇಳುತ್ತೇವೆ ಎಂದು ವ್ಯಂಗ್ಯವಾಗಿ ಹೇಳಿದರು.

ಗುಣಮಟ್ಟದ ಉನ್ನತ ಶಿಕ್ಷಣವು ಅಭಿವೃದ್ಧಿ ಹೊಂದಿದ ಆರ್ಥಿಕತೆಗಳ ವಿಶಿಷ್ಟ ಲಕ್ಷಣ-ಉಪರಾಷ್ಟ್ರಪತಿ

ರಸ್ತೆಗಳು ಗುಂಡಿಗಳಾಗಿವೆ, ನನಗೆ ಜವಾಬ್ದಾರಿ ಕೊಟ್ಟು ನೋಡಲಿ ಎಂಬ ರಾಮಲಿಂಗಾ ರೆಡ್ಡಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಎಸ್ ಟಿಎಸ್, ಸತತ ಮಳೆಯಿಂದ ಬೆಂಗಳೂರು ರಸ್ತೆಗಳು ವ್ಯತ್ಯಾಸವಾಗಲಿದೆ. ಅವರಿದ್ದಾಗಲೂ ಮಳೆಯಾದಾಗ ರಸ್ತೆಗಳೆಲ್ಲಾ ಚರಂಡಿಯಾಗಿತ್ತು. ಇವರಿಗೆ ಅವಕಾಶ ಕೊಟ್ಟು ನೋಡಿದ್ದೇವಲ್ವಾ? ಇವರು ಸಮ್ಮಿಶ್ರ ಸರ್ಕಾರದಲ್ಲಿ ಏನು ಮಾಡಿದರು? ರಾಮಲಿಂಗಾ ರೆಡ್ಡಿ ಹಿರಿಯರಾಗಿದ್ದರು, ಅವರಿಗೆ ಸಚಿವ ಸ್ಥಾನವನ್ನೇ ಕೊಟ್ಟಿರಲಿಲ್ಲ ಹೀಗಿರುವಾಗ ಕೊಟ್ಟು ನೋಡೋದು ಎಲ್ಲಿ ಬರುತ್ತದೆ ಎಂದು ತಿರುಗೇಟು ನೀಡಿದರು.

ಬಿಟ್ ಕಾಯಿನ್ ದಂಧೆ ಸಂಬಂಧ ತನಿಖೆ ನಡೆಯಬೇಕೆಂಬ ಸಿದ್ದು ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್ ಬರುವ ಮೊದಲು ಸಿದ್ದರಾಮಯ್ಯ ಚೆನ್ನಾಗಿಯೇ ಇದ್ದರು. ಕೋವಿಡ್ ಬಂದಮೇಲೆ ಏನು ಮಾತನ್ನಾಡುತ್ತಾರೋ ಅವರಿಗೇ ಗೊತ್ತಿಲ್ಲ. ಅವರ ಮಾತನ್ನ ಗಂಭೀರವಾಗಿ ಪರಿಗಣಿಸಬಾರದು. ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಯಾವುದೇ ಕಂಟಕ ಇಲ್ಲ. ಕಂಟಕ‌ವಿರುವುದು ಕಾಂಗ್ರೆಸ್ ಪಕ್ಷದವರಿಗೆ ಮಾತ್ರ. ಬಿಜೆಪಿಯಲ್ಲಿ ಎಲ್ಲರೂ ಆರಾಮವಾಗಿದ್ದೇವೆ ಎಂದರು.

Dailyhunt
Disclaimer: This content has not been generated, created or edited by Dailyhunt. Publisher: Udayavani