ಚಾಮರಾಜನಗರ: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ನಾಲ್ಕನೇ ಆರೋಪಿ ಮಹಿಮ ದಾಸ್ ಆಸ್ಪತ್ರೆಯಿಂದ ವಿಡಿಯೋದಲ್ಲಿ ಮಾತನಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಮಾತನಾಡಿರುವ ಮಹಿಮ ದಾಸ್, ಶೂಟೌಟ್ ನಡೆದ ಸಂದರ್ಭದಲ್ಲಿ ತಾನು ಬೆಟ್ಟದಿಂದ ಕೆಳಗಿಳಿದು ಬಂದಿದ್ದೆ.
ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿಗೆ ಬಂದಿದ್ದು, ಬಂದ ತಕ್ಷಣ ಗುಂಡು ಹಾರಿಸಲು ಆರಂಭಿಸಿದರು. ಇದರಿಂದ ಭಯಗೊಂಡು ತಾನು ಅಲ್ಲಿಂದ ಓಡಿಹೋದೆ ಎಂದು ಹೇಳಿಕೊಂಡಿದ್ದಾನೆ.
ಸುಮಾರು ಬೆಳಿಗ್ಗೆ 5.20ರ ಸಮಯವಾಗಿತ್ತು. ಸ್ಥಳದಿಂದ ಓಡಿ ಹೋದ ಬಳಿಕ ಸುಮಾರು ಐದು ನಿಮಿಷಗಳವರೆಗೆ ಯಾವುದೇ ಶಬ್ದ ಕೇಳಿಸಲಿಲ್ಲ. ತಾನು ಅಸ್ವಸ್ಥನಾಗಿದ್ದ ಹಿನ್ನೆಲೆಯಲ್ಲಿ ಅಲ್ಲಿಂದ ಮನೆಗೆ ತೆರಳಿದ್ದು, ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ವಿಡಿಯೋದಲ್ಲಿ ತಿಳಿಸಿದ್ದಾನೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ತನ್ನನ್ನು ಸಾಕ್ಷಿಯಾಗಿ ವಿಚಾರಿಸಲು ವಿವಿಧೆಡೆ ಹುಡುಕಾಡುತ್ತಿದ್ದಾರೆ. ಇದರಿಂದ ತಾನು ಭಯಗೊಂಡಿದ್ದು, ಪೊಲೀಸರು ಈ ಬಗ್ಗೆ ಗಮನಹರಿಸಿ ರಕ್ಷಣೆ ನೀಡಬೇಕು ಎಂದು ಮಹಿಮ ದಾಸ್ ಮನವಿ ಮಾಡಿದ್ದಾನೆ.
ಮಹಿಮ ವಿಡಿಯೊ ಮಾಡಿರುವ ಸ್ಥಳ ಆಸ್ಪತ್ರೆ ಎಂಬುದು ಅದರ ಹಿನ್ನೆಲೆಯಿಂದ ತಿಳಿಯುತ್ತದೆ. ಸಚಿವ ಪುಟ್ಟರಂಗಶೆಟ್ಟಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಈತನನ್ನು ನೋಡಲು ಹೋಗಿದ್ದಾಗ ಮಹಿಮ ಇದೇ ಶರ್ಟ್ ಧರಿಸಿದ್ದ. ಈಗ ವಿಡಿಯೋದಲ್ಲೂ ಅದೇ ಶರ್ಟ್ ಧರಿಸಿದ್ದಾನೆ. ಆದರೆ ಈ ವಿಡಿಯೋ ಅದೇ ಖಾಸಗಿ ಆಸ್ಪತ್ರೆಯೇ? ಅಥವಾ ಬೇರೆ ಆಸ್ಪತ್ರೆಯೇ ಎಂಬುದು ಖಚಿತವಾಗಿಲ್ಲ.
ಈಗ ಮಹಿಮ ಎಲ್ಲಿದ್ದಾನೆಂಬುದು ಪೊಲೀಸರಿಗೆ ಅರಣ್ಯಾಧಿಕಾರಿಗಳಿಗೆ ತಿಳಿದಿಲ್ಲ.
ಶೂಟೌಟ್ ಪ್ರಕರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಮಹಿಮ ದಾಸ್ ಬಿಡುಗಡೆ ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

