Dailyhunt Logo
  • Light mode
    Follow system
    Dark mode
    • Play Story
    • App Story
ದಾಳಿ ಮೂಲಕ ಪಂಜಾಬ್‌ನ ಶಾಂತಿಗೆ ಧಕ್ಕೆ ತರಲು ಬಿಡುವುದಿಲ್ಲ: ಸುಖಬೀರ್ ಬಾದಲ್

ದಾಳಿ ಮೂಲಕ ಪಂಜಾಬ್‌ನ ಶಾಂತಿಗೆ ಧಕ್ಕೆ ತರಲು ಬಿಡುವುದಿಲ್ಲ: ಸುಖಬೀರ್ ಬಾದಲ್

ನಾಂದೇಡ್:ಪಂಜಾಬ್‌ನ ಶಾಂತಿಗೆ ಧಕ್ಕೆ ತರುವ ಯಾವುದೇ ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ ಎಂದು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮುಖ್ಯಸ್ಥ ಹಾಗೂ ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.

ಮಹಾರಾಷ್ಟ್ರದ ನಾಂದೇಡ್‌ನ ಗುರುದ್ವಾರದಲ್ಲಿ ನಿಹಾಂಗ್ ಸಿಖ್‌ವೊಬ್ಬ ಕಿರ್ಪಾಣ್‌ನಿಂದ ದಾಳಿ ನಡೆಸಿದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಬಾದಲ್ ಚಿಕಿತ್ಸೆ ಪಡೆದು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾದರು.

ಈ ವೇಳೆ ಮಾತನಾಡಿದ ಅವರು, ಪಂಜಾಬ್‌ನಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಕೆಲವರು ಪರಿಸ್ಥಿತಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

"ಪಂಜಾಬ್‌ನ ಪರಿಸ್ಥಿತಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಶಾಂತಿ ಕದಡುವುದೇ ಅವರ ಉದ್ದೇಶ. ಆದರೆ ಶಿರೋಮಣಿ ಅಕಾಲಿ ದಳದ ಅಧ್ಯಕ್ಷನಾಗಿ ಅದಕ್ಕೆ ನಾನು ಎಂದಿಗೂ ಅವಕಾಶ ನೀಡುವುದಿಲ್ಲ. ನನ್ನ ತಂದೆಯೂ ಇದಕ್ಕೆ ಅವಕಾಶ ನೀಡಿರಲಿಲ್ಲ. ಎರಡೂ ಬಾರಿ ಪವಿತ್ರ ಸ್ಥಳಗಳಲ್ಲೇ ನನ್ನ ಮೇಲೆ ದಾಳಿ ನಡೆದಿದೆ" ಎಂದು ಬಾದಲ್ ಹೇಳಿದರು.

"ಅಕಾಲಿ ದಳ ಯಾವುದಕ್ಕೂ ಹೆದರುವುದಿಲ್ಲ. ಪಂಜಾಬ್‌ನ ಶಾಂತಿಯನ್ನು ಕದಡಲು ಬಯಸುವವರ ಮುಂದೆ ನಾವು ತಲೆಬಾಗುವುದಿಲ್ಲ. ದೇವರು ನನ್ನೊಂದಿಗಿದ್ದಾನೆ" ಎಂದು ಅವರು ಹೇಳಿದರು.

ಒಂದೂವರೆ ಗಂಟೆ ಶಸ್ತ್ರಚಿಕಿತ್ಸೆ
ಗುರುವಾರ ನಾಂದೇಡ್ ನಗರದ ಹೊರವಲಯದಲ್ಲಿರುವ 'ಗುರುದ್ವಾರ ಮಾತಾ ಸಾಹಿಬ್ ದೇವ್ ಜೀ ಮುಕತ್'ನಲ್ಲಿ ನಿಹಾಂಗ್ ಸಿಖ್‌ವೊಬ್ಬ ಕಿರ್ಪಾಣ್‌ನಿಂದ ದಾಳಿ ನಡೆಸಿದ್ದರು. ದಾಳಿಯಲ್ಲಿ ಬಾದಲ್ ಅವರ ಕೈಗೆ ತೀವ್ರ ಗಾಯವಾಗಿತ್ತು.

ನಾಂದೇಡ್‌ನ ಯಶೋಸಾಯಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಬಾದಲ್ ಅವರಿಗೆ ಸುಮಾರು 90 ನಿಮಿಷಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಕೈಯಲ್ಲಿನ ಟೆಂಡನ್‌ಗೆ ಆಳವಾದ ಗಾಯವಾಗಿತ್ತು. ಶಸ್ತ್ರಚಿಕಿತ್ಸೆ ಮೂಲಕ ಟೆಂಡನ್‌ ಅನ್ನು ಸರಿಪಡಿಸಲಾಗಿದ್ದು, ಪ್ಲಾಸ್ಟಿಕ್ ಸರ್ಜನ್ ಉಲ್ನಾರ್ ಆರ್ಟರಿ ಹಾಗೂ ನರಕ್ಕೂ ಚಿಕಿತ್ಸೆ ನೀಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಬಾದಲ್ ಅವರ ಆರೋಗ್ಯ ಸ್ಥಿರವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಅವರನ್ನು ಮಧ್ಯಾಹ್ನ ಪಂಜಾಬ್‌ಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತಾ ಸಿಬಂದಿಗೂ ಗಾಯ
ದಾಳಿಯ ವೇಳೆ ಬಾದಲ್ ಅವರ ಭದ್ರತೆಗೆ ನಿಯೋಜಿಸಲಾಗಿದ್ದ ಓರ್ವ ಭದ್ರತಾ ಸಿಬಂದಿಗೂ ಗಾಯವಾಗಿದೆ. ಘಟನೆ ನಡೆದಾಗ ಬಾದಲ್ ಅವರ ಪತ್ನಿ ಹಾಗೂ ಅಕಾಲಿ ದಳದ ಸಂಸದೆ ಹರ್‌ಸಿಮ್ರತ್ ಕೌರ್ ಬಾದಲ್ ಕೂಡ ಅವರೊಂದಿಗೆ ಇದ್ದರು.

ದಾಳಿಯ ಬಳಿಕದ ವಿಡಿಯೋದಲ್ಲಿ ಬಾದಲ್ ಅವರ ಬಲಗೈಗೆ ಕೇಸರಿ ಬಣ್ಣದ ಬಟ್ಟೆ ಸುತ್ತಿಕೊಂಡು ನಡೆಯುತ್ತಿರುವ ದೃಶ್ಯ ಕಂಡುಬಂದಿತ್ತು.

2024ರಲ್ಲೂ ಹತ್ಯೆ ಯತ್ನ
ಸುಖಬೀರ್ ಸಿಂಗ್ ಬಾದಲ್ ಅವರ ಮೇಲೆ 2024ರ ಡಿಸೆಂಬರ್ 4ರಂದು ಅಮೃತಸರದ ಸ್ವರ್ಣಮಂದಿರದ ಹೊರಭಾಗದಲ್ಲೂ ಹತ್ಯೆ ಯತ್ನ ನಡೆದಿತ್ತು. ಅಂದು ಅಕಾಲ ತಖ್ತ್ ವಿಧಿಸಿದ್ದ ಧಾರ್ಮಿಕ ಶಿಕ್ಷೆಯ ಭಾಗವಾಗಿ ಬಾದಲ್ 'ಸೇವಾದಾರ್' ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ವೇಳೆ ಬಂದೂಕುಧಾರಿಯೊಬ್ಬರು ಬಾದಲ್ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದರು. ಆದರೆ ಭದ್ರತಾ ಸಿಬ್ಬಂದಿ ತಕ್ಷಣವೇ ಆತನನ್ನು ಹಿಡಿದು ಬಂಧಿಸಿದ್ದರು. ಘಟನೆಯಲ್ಲಿ ಬಾದಲ್ ಅವರಿಗೆ ಯಾವುದೇ ಗಾಯವಾಗಿರಲಿಲ್ಲ.

2007ರಿಂದ 2017ರವರೆಗೆ ಪಂಜಾಬ್‌ನಲ್ಲಿ ಅಕಾಲಿ ದಳದ ಸರ್ಕಾರವಿದ್ದ ಅವಧಿಯಲ್ಲಿ ನಡೆದಿದ್ದ 'ತಪ್ಪುಗಳಿಗಾಗಿ' ಸುಖಬೀರ್ ಬಾದಲ್ ಸೇರಿದಂತೆ ಹಲವು ಅಕಾಲಿ ದಳ ನಾಯಕರಿಗೆ ಅಕಾಲ ತಖ್ತ್ 'ತಂಖಾ' (ಧಾರ್ಮಿಕ ಶಿಕ್ಷೆ) ವಿಧಿಸಿತ್ತು.

ಆರೋಪಿ ಜಸ್ಪಾಲ್ ಸಿಂಗ್
ಸುಖಬೀರ್ ಸಿಂಗ್ ಬಾದಲ್ ಅವರ ಮೇಲೆ ಗುರುದ್ವಾರದೊಳಗೆ ದಾಳಿ ನಡೆಸಿ ಬಂಧನಕ್ಕೊಳಗಾಗಿರುವ ಆರೋಪಿ ಜಸ್ಪಾಲ್ ಸಿಂಗ್ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಗೆ ನಿಖರ ಕಾರಣವೇನು ಎಂಬುದು ಇನ್ನೂ ತನಿಖೆಯಿಂದ ದೃಢಪಟ್ಟಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

60ರಿಂದ 62 ವರ್ಷ ವಯಸ್ಸಿನ ಜಸ್ಪಾಲ್ ಸಿಂಗ್ ವಾಣಿಜ್ಯ ಹಾಗೂ ಕಾನೂನು ಪದವೀಧರನಾಗಿದ್ದು, ಕುಟುಂಬ ಸಮೇತ ಪುಣೆಯಲ್ಲಿ ನೆಲೆಸಿದ್ದ. ಕಳೆದ ಎರಡು ವರ್ಷಗಳಿಂದ ನಾಂದೇಡ್‌ನ ಗುರುದ್ವಾರದಲ್ಲಿ 'ಸೇವಾದಾರ್' (ಸ್ವಯಂಸೇವಕ) ಆಗಿ ಕಾರ್ಯನಿರ್ವಹಿಸುತ್ತಿದ್ದ ಆತ, ನಾಂದೇಡ್‌ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡ್ಖೇಡ್ ಪೊಲೀಸ್ ಠಾಣೆಯಲ್ಲಿ ಜಸ್ಪಾಲ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307ರ ಅಡಿಯಲ್ಲಿ ಕೊಲೆ ಯತ್ನ, ಸೆಕ್ಷನ್ 353ರ ಅಡಿಯಲ್ಲಿ ಸರ್ಕಾರಿ ನೌಕರ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ ಆರೋಪ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 4/25ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಆರೋಪಿಯನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದಲ್ಲದೆ, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಡಿಯಲ್ಲಿ ಕೊಲೆ ಯತ್ನ, ಅಪಾಯಕಾರಿ ಆಯುಧ ಅಥವಾ ವಿಧಾನ ಬಳಸಿ ಉದ್ದೇಶಪೂರ್ವಕವಾಗಿ ಗಾಯಗೊಳಿಸುವುದು ಹಾಗೂ ಸರ್ಕಾರಿ ನೌಕರ ಕರ್ತವ್ಯ ನಿರ್ವಹಿಸುವುದನ್ನು ತಡೆಯುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಗಂಭೀರ ಗಾಯಗೊಳಿಸಿದ ಆರೋಪಗಳನ್ನೂ ಜಸ್ಪಾಲ್ ಸಿಂಗ್ ವಿರುದ್ಧ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ದಾಳಿಯ ಹಿಂದಿನ ಉದ್ದೇಶವೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani