ದಾವಣಗೆರೆ: ಬಿಜೆಪಿ ಕರ್ನಾಟಕದ ಪಾಲಿಗೆ ಹಾನಿಕಾರಕವಾಗಿದೆ. ಇಂದು " ದಂಗಲ್ " ಚಲನಚಿತ್ರದ ರೀತಿಯಲ್ಲಿ ಹೋದಲೆಲ್ಲ ಹಾನಿ ಮಾಡುತ್ತದೆ. ಬಿಜೆಪಿ ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತ ಬಂದಿದೆ. ಗ್ಯಾರಂಟಿ ಯೋಜನೆ ಘೋಷಿಸಿದಾಗ ಅದು ಅನುಷ್ಠಾನ ಮಾಡುವುದಿಲ್ಲ ಎಂದು ಟೀಕಿಸುತ್ತಿತ್ತು.
ನಾವು ಅನುಷ್ಠಾನ ಮಾಡಿದಾಗ ಇನ್ನೊಂದು ರೀತಿ ಆರೋಪ ಮಾಡುತ್ತಿದೆ. ಯಾರು ಏನೇ ಹೇಳಿದರೂ ಕಾಂಗ್ರೆಸ್ ಕಳೆದ 3 ವರ್ಷಗಳಿಂದ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಬಂದಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲ ಹೇಳಿದರು.
ಎ.4ರ ಶನಿವಾರ ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಹೆಚ್ಚಿನ ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಂಡಿದ್ದಾರೆ. ಬಿಜೆಪಿಯ ಬೆಲೆ ಏರಿಕೆಯನ್ನು ಎದುರಿಸಲು ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು ಜನರಿಗೆ ಶಕ್ತಿ ತುಂಬುತ್ತಿವೆ. ಗ್ಯಾರಂಟಿ ಯೋಜನೆ ಸದ್ಬಳಕೆ ಮಾಡಿಕೊಳ್ಳುವ ಮೂಲಕ ದೇಶದಲ್ಲಿಯೇ ಕರ್ನಾಟಕ ರಾಜ್ಯ ಮಹಿಳಾ ಪ್ರಧಾನ ರಾಜ್ಯವಾಗಿದೆ ಎಂದರು.
ದೇಶದ ಸರ್ಕಾರದಲ್ಲಿ 2 ಮಾದರಿಗಳು ಇವೆ. 1 ಕಾಂಗ್ರೆಸ್ನ ಗ್ಯಾರಂಟಿ ಮಾದರಿ. ಇನ್ನೊಂದು ಬಿಜೆಪಿಯ ಜೇಬಿಗೆ ಕತ್ತರಿ ಹಾಕುವ ಮಾದರಿ. ಕಾಂಗ್ರೆಸ್ನ ಗ್ಯಾರಂಟಿ ಜನರ ಜೇಬು ತುಂಬಿಸುವ ಕೆಲಸ ಮಾಡಿದರೆ, ಬಿಜೆಪಿ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡುತ್ತದೆ ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಪೆಟ್ರೋಲ್, ಡಿಸೇಲ್, ಗ್ಯಾಸ್ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗಿವೆ. ಕೇಂದ್ರದ ಈ ಬೆಲೆ ಏರಿಕೆಯನ್ನು ಎದುರಿಸಲು ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳು ತಕ್ಕ ಮಟ್ಟಿಗೆ ಸಹಕಾರಿಯಾಗಿವೆ ಎಂದರು.

