ಧಾರವಾಡ : ನಿರ್ಮಿತ ಕೇಂದ್ರದ ಎಂಜಿನಿಯರ್ ಸುಧೀಂದ್ರ ಕುಮಾರ ಕಳಸ ಅವರ ಮೇಲೆ ಏಕಕಾಲದಲ್ಲಿ ನಾಲ್ಕು ಕಡೆ ಲೋಕಾಯುಕ್ತ ಪೊಲೀಸರ ತಂಡ ದಾಳಿ ಮಾಡಿದ್ದು, ಲಕ್ಷಾಂತರ ಮೌಲ್ಯದ ಆಸ್ತಿಯ ದಾಖಲೆ ಸಿಕ್ಕಿವೆ.
ಇಸ್ಕಾನ್ ದೇವಸ್ಥಾನ ಬಳಿ ಇರುವ ನಿರ್ಮಿತ ಕೇಂದ್ರದ ಕಚೇರಿ, ಅವರ ನಿವಾಸದೊಂದಿಗೆ ಅವರ ಬಾಡಿಗೆ ಮನೆಯ ಮೇಲೆಯೂ ದಾಳಿ ಮಾಡಲಾಗಿದೆ.
ಇದಲ್ಲದೇ ಕವಿವಿ ಬಳಿ ಇವರದ್ದೇ ಮಾಲೀಕತ್ವದ ಪಿಜಿ ಮೇಲೆಯೂ ದಾಳಿ ಮಾಡಿ, ಶೋಧ ಕಾರ್ಯ ಕೈಗೊಳ್ಳಲಾಗಿದೆ. ಈ ದಾಳಿಯಲ್ಲಿ 8 ನಿವೇಶನ, 7 ಎಕರೆ ಜಮೀನು ದಾಖಲೆಗಳು ಸೇರಿದಂತೆ ಮಹತ್ವದ ದಾಖಲೆ ಕಲೆ ಹಾಕಲಾಗಿದೆ.
ಅಂದಾಜು 80 ರಿಂದ 90 ಲಕ್ಷ ಮೌಲ್ಯದ ಅಕ್ರಮ ಆಸ್ತಿಯ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಆದಾಯಕ್ಕಿಂತ ಶೇ.91 ರಷ್ಟು ಅಕ್ರಮ ಆಸ್ತಿ ಮಾಡಿರುವ ಆರೋಪದಡಿ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸಲಾಗಿದೆ.

