ಬೀದರ್ : ತೆಲಂಗಾಣ – ಛತ್ತೀಸ್ಗಢ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗಿಲಗಿಲಿ ಗ್ರಾಮದ ಸಿಆರ್ಪಿಎಫ್ ಯೋಧ ಸರ್ವಿಸ್ ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದ್ದು, ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.
ತೆಲಂಗಾಣ-ಛತ್ತೀಸ್ಗಢ ಗಡಿ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳನ್ನು ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರ ಭದ್ರತಾ ಪಡೆಗಳನ್ನು ನಿಯೋಜಿಸಿದ್ದು, 2ನೇ ಬೆಟಾಲಿಯನ್ನ ಸಿಆರ್ಪಿಎಫ್ ಎಎಸ್ಐ ಆಗಿದ್ದ ಶಿವಾನಂದ ಛತ್ತೀಸ್ಗಢದ ಸುಕ್ಮಾ ಜಿಲ್ಲೆಯ ಗೈಡ್ರಾಜ್ನಲ್ಲಿ ತನ್ನ ಎಕೆ-47 ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಬೆಳಿಗ್ಗೆ 7ರ ಸುಮಾರಿಗೆ ಈ ಘಟನೆ ನಡೆದಿದ್ದು, ಗುಂಡಿನ ಸದ್ದಿಗೆ ಯೋಧ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿದಾಗ ಶಿವಾನಂದ ರಕ್ತದ ಮಡಿಲಲ್ಲಿ ಬಿದ್ದಿರುವುದು ಕಂಡು ಬಂದಿದೆ.
ಯೋಧ ಶಿವಾನಂದ್ ಅವರು ಲಾಕ್ಡೌನ್ ಹಿನ್ನಲೆ ಪತ್ನಿ ಮತ್ತು ಮಕ್ಕಳನ್ನು ಸ್ವಗ್ರಾಮದಲ್ಲಿ ಬಿಟ್ಟಿದ್ದರು. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ, ಈ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತ ಸಿಆರ್ಪಿಎಫ್ ಯೋಧನ ಮೃತದೇಹ ಬುಧವಾರ ರಾತ್ರಿವರೆಗೆ ಸ್ವಗ್ರಾಮಕ್ಕೆ ತಲುಪಲಿದೆ ಎಂದು ಎಸ್ಪಿ ಡಿ.ಎಲ್ ನಾಗೇಶ್ ಖಚಿತಪಡಿಸಿದ್ದಾರೆ.

