ದಾವಣಗೆರೆ: ಉಪಚುನಾವಣೆಯಲ್ಲಿ ಮೃತಪಟ್ಟಿರುವ ಶಾಸಕರ ಕುಟುಂಬ ಸದಸ್ಯರನ್ನೇ ಕಣಕ್ಕಿಳಿಸುವ ಪಕ್ಷದ ನಿರ್ಧಾರವನ್ನುಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಸಮರ್ಥಿಸಿಕೊಂಡಿದ್ದು, ಹಳೆಯ ಪದ್ಧತಿಯನ್ನು ಅನುಸರಿಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಕುಟುಂಬ ರಾಜಕೀಯದ ಆರೋಪ ಮಾಡಿ ಬಿಜೆಪಿಯಿಂದ ಬಂದಿರುವ ಟೀಕೆಗಳ ಬೆಗ್ಗೆ ಉಲ್ಲೇಖಿಸಿ, "ಒಬ್ಬ ನಾಯಕ ನಿಧನ ಹೊಂದಿದಾಗ, ಕುಟುಂಬದ ಸದಸ್ಯರೊಬ್ಬರಿಗೆ ಆ ಕ್ಷೇತ್ರವನ್ನು ಪ್ರತಿನಿಧಿಸಲು ಅವಕಾಶ ನೀಡುವುದು ಸಾಮಾನ್ಯ ಪದ್ಧತಿ.
ಕಾಂಗ್ರೆಸ್ ಪಕ್ಷವು ಇಲ್ಲಿ ಆ ಪದ್ಧತಿಯನ್ನು ಅನುಸರಿಸಿದೆ,"ಎಂದು ಸಿಎಂ ಹೇಳಿದರು.
ಏಪ್ರಿಲ್ 9 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ನಾವು ಶೇ. 100 ರಷ್ಟು ಗೆಲ್ಲುವ ವಿಶ್ವಾಸ ಹೊಂದಿದ್ದೇವೆ" ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
"ಅಲ್ಪಸಂಖ್ಯಾಕರು ಯಾವಾಗಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಅವರು ಪಕ್ಷೇತರರು ಅಥವಾ ಬಿಜೆಪಿಯನ್ನು ಬೆಂಬಲಿಸುವ ಸಾಧ್ಯತೆ ಕಡಿಮೆ. ಸ್ವಾತಂತ್ರ್ಯದ ನಂತರ, ಅವರು ಕಾಂಗ್ರೆಸ್ ಜತೆ ನಿಂತಿದ್ದಾರೆ ಮತ್ತು ಈ ಚುನಾವಣೆಯೂ ಇದಕ್ಕೆ ಹೊರತಾಗಿಲ್ಲ" ಎಂದು ಸಿಎಂ ಹೇಳಿದರು.
ಕಾಂಗ್ರೆಸ್ನೊಳಗೆ ನಾಯಕತ್ವದ ಜಗಳ ನಡೆಯುತ್ತಿದೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿ, ಪಕ್ಷದ ನಿಲುವು ಸ್ಪಷ್ಟವಾಗಿದೆ. ರಾಹುಲ್ ಗಾಂಧಿ ಅವರು ನಮ್ಮ ನಾಯಕ. ಆದ್ದರಿಂದ, ಬಿರುಕು ಉಂಟಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಭೋಜನ ಕೂಟ, ಸಭೆ ನಡೆದರೆ ಅದರಲ್ಲಿ ಯಾವುದೇ ತಪ್ಪಿಲ್ಲ" ಎಂದರು.
''ಅಧಿಕಾರ ಹಂಚಿಕೆ ವಿಷಯದ ಬಗ್ಗೆ, ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ'' ಎಂದರು.

