ಉಡುಪಿ: ಪ್ರಸಕ್ತ ಸಾಲಿನ (2026-27) ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ನೋಂದಣಿ ಅವಧಿ ಜೂ. 30ಕ್ಕೆ ಮುಕ್ತಾಯವಾಗಿದ್ದು, ರೈತರು, ಬೆಳೆಗಾರರ ಅನುಕೂಲಕ್ಕಾಗಿ ಬೆಳೆ ವಿಮೆ ಯೋಜನೆಯ ನೋಂದಣಿಗೆ ಜು. 30ರ ವರೆಗೂ ಅವಕಾಶ ಕಲ್ಪಿಸಬೇಕು ಎಂದು ಕೋರಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರದ ಕೃಷಿ ಮತ್ತು ತೋಟಗಾರಿಕ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರದ ಕೃಷಿ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ.
ಅಡಿಕೆ, ಕಾಳುಮೆಣಸು ಮೊದಲಾದ ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ರೈತರು ಆಸಕ್ತಿ ಹೊಂದಿದ್ದಾರೆ. ಜಿಲ್ಲೆಯಲ್ಲಿ ತಡವಾಗಿ ಬಂದ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದ ರೈತಾಪಿ ವರ್ಗದ ಕೆಲಸದ ಒತ್ತಡ, ಸಾಲು ಸಾಲಾಗಿ ಬಂದ ಸರಕಾರಿ ರಜೆಗಳಿಂದ ಬ್ಯಾಂಕ್ ವ್ಯವಹಾರ ಅಲ್ಲಲ್ಲಿ ಸ್ಥಗಿತವಾಗಿದ್ದು, ರೈತರು ವಿಮಾ ಸೌಲಭ್ಯ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ಜತೆಗೆ ಬೆಳೆ ವಿಮೆ ಯೋಜನೆಯಡಿ ತಾಂತ್ರಿಕ ದೋಷ ಸರಿಪಡಿಸುವುದು ವಿಳಂಬವಾದ ಹಿನ್ನೆಲೆಯಲ್ಲಿ ಅನೇಕ ರೈತರು ವಿಮಾ ಯೋಜನೆ ಪಡೆಯುವಲ್ಲಿ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ 1 ತಿಂಗಳು ನೋಂದಣಿಗೆ ಅವಕಾಶ ಕಲ್ಪಿಸಿ ಎಂದಿದ್ದಾರೆ.

