ಜಬಲ್ಪುರ(ಮಧ್ಯಪ್ರದೇಶ):9 ಜೀವಗಳನ್ನು ಬಲಿತೆಗೆದುಕೊಂಡ ದೋಣಿ ದುರಂತದ ಅತ್ಯಂತ ಹೃದಯವಿದ್ರಾವಕ ದೃಶ್ಯಕ್ಕೆ ಸಾಕ್ಷಿಯಾಗಿ ರಕ್ಷಣಾ ಕಾರ್ಯದ ವೇಳೆ ಶುಕ್ರವಾರ ತಾಯಿಯೊಬ್ಬಳು ಆಕೆಯ ನಾಲ್ಕು ವರ್ಷದ ಮಗನನ್ನ ಬಿಗಿದಪ್ಪುಗೆಯಲ್ಲಿ ಹಿಡಿದ ಸ್ಥಿತಿಯಲ್ಲೇ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ದೃಶ್ಯ ಕಲ್ಲೆದೆಯನ್ನೂ ಕರಗಿಸುವಂತಿತ್ತು.
ಮಹಿಳೆ ಮತ್ತು ಆಕೆಯ ಮಗುವಿನ ಶವಗಳನ್ನು ನೀರಿನಿಂದ ಹೊರತೆಗೆಯಲಾಗಿದ್ದು,ಇಬ್ಬರೂ ಸ್ಥಳದಲ್ಲಿ ನೆರೆದಿದ್ದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಸಂಪುಟ ಸಚಿವ ರಾಕೇಶ್ ಸಿಂಗ್ ಕೂಡ ಭಾವುಕರಾಗಿ ಕಣ್ಣೀರು ಹಾಕಿದರು ದುಃಖ ತಡೆದುಕೊಳ್ಳಲು ಕಷ್ಟಪಟ್ಟರು.
ಗುರುವಾರ ಹಠಾತ್ ಬಲವಾದ ಬಿರುಗಾಳಿ ಬೀಸಿ ಬಾರ್ಗಿ ಅಣೆಕಟ್ಟು ಜಲಾಶಯದಲ್ಲಿ 29 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕ್ರೂಸ್ ಮಗುಚಿ ಬಿದ್ದ ಪರಿಣಾಮ 9 ಜನರು ಸಾವನ್ನಪ್ಪಿದ್ದರು.
ರಕ್ಷಣಾ ಕಾರ್ಯಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡಗಳು, ಸ್ಥಳೀಯ ಪೊಲೀಸರು ಮತ್ತು ಆಡಳಿತ ಅಧಿಕಾರಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

