
ಹೊಸದಿಲ್ಲಿ/ಶ್ರೀನಗರ: ಜಮ್ಮು – ಕಾಶ್ಮೀರದಲ್ಲಿ ಹಿಂದೂ ಮತ್ತು ಸಿಕ್ಖ್ ಸಮುದಾಯದ ಏಳು ಮಂದಿಯ ಹತ್ಯೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಭದ್ರತ ಸಂಸ್ಥೆಗಳು ರವಿವಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿ 900ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದುಕೊಂಡಿವೆ.
ಕಲ್ಲೆಸೆತದಲ್ಲಿ ತೊಡಗುತ್ತಿದ್ದ ಯುವಕರನ್ನೂ ಪೊಲೀಸರು ವಶಕ್ಕೆ ಪಡೆದು 7 ಮಂದಿಯ ಹತ್ಯೆಯ ಹಿಂದೆ ಯಾರು ಇದ್ದಾರೆ ಎಂಬ ಅಂಶವನ್ನು ಪತ್ತೆ ಹಚ್ಚಲು ಪ್ರಯತ್ನ ನಡೆಸುತ್ತಿದ್ದಾರೆ.
ವಶಕ್ಕೆ ಪಡೆದವರ ಪೈಕಿ ಬಹುತೇಕ ಮಂದಿ ನಿಷೇಧಿತ ಜಮಾತೆ ಇಸ್ಲಾಮಿ ಉಗ್ರ ಸಂಘಟನೆ ಜತೆ ನಂಟು ಹೊಂದಿರುವವರು ಮತ್ತು ಶ್ರೀನಗರ, ಬದ್ಗಾಂ ಸೇರಿದಂತೆ ದಕ್ಷಿಣ ಕಾಶ್ಮೀರದಿಂದ ಬಂದಿರುವ ಶಂಕಿತ ಉಗ್ರರು. ಹತ್ಯೆಯ ಸರಪಳಿಯನ್ನು ತುಂಡರಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಎನ್ಐಎ ದಾಳಿ
ಐಸಿಸ್ ಉಗ್ರ ಸಂಘಟನೆ ದೇಶದ ಯುವಕರನ್ನು ತನ್ನತ್ತ ಸೆಳೆಯಲು “ಐಎಸ್ಐಎಸ್ ವಾಯ್ಸ ಆಫ್ ಹಿಂದ್’ ಎಂಬ ನಿಯತಕಾಲಿಕವನ್ನು ಹೊಂದಿದೆ. ಅದಕ್ಕೆ ಕೆಲಸ ಮಾಡಿ, ಯುವಕರನ್ನು ಉಗ್ರ ಸಂಘಟನೆ ಸೇರುವಂತೆ ಪುಸಲಾಯಿಸುವ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಎನ್ಐಎಯು ಜಮ್ಮು-ಕಾಶ್ಮೀರದ 16 ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ನಡೆಸಿದೆ. ಅಬು ಹಝೀರ್ ಅಲ್ ಬದ್ರಿ ಎಂಬ ಸೈಬರ್ ಸಂಸ್ಥೆ ಈ ನಿಯತಕಾಲಿಕವನ್ನು ಕರ್ನಾಟಕ ಸಹಿತ ವಿವಿಧ ರಾಜ್ಯ ಗಳ ಭಾಷೆಗಳಿಗೆ ತರ್ಜುಮೆ ಮಾಡುವ ಹೊಣೆ ಹೊತ್ತುಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ಅಧಿಕಾರಿಗಳು ಮತ್ತು ಕರ್ನಾಟಕ ಪೊಲೀಸರು ಆ. 6ರಂದು ಭಟ್ಕಳದಲ್ಲಿ ದಾಳಿ ನಡೆಸಿದ್ದರು ಮತ್ತು ಜುಫ್ರಿ ಜ್ವಾಹರ್ ದಮುದಿ ಎಂಬಾತನನ್ನು ಬಂಧಿಸಿದ್ದರು.