ಕಡಬ: ಹಾಸನದಿಂದ ಕೇರಳಕ್ಕೆ ಅಮಾನವೀಯವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಕಂಟೇನರ್ ವಾಹನವನ್ನು ಕಡಬ ಪೊಲೀಸರು ತಡೆದು ಸುಮಾರು 20 ಜಾನುವಾರುಗಳನ್ನು ರಕ್ಷಿಸಿ ಜಾನುವಾರು ಸಾಗಾಟ ಮಾಡುತ್ತಿದ್ದ ಬೇಲೂರು ತಾಲೂಕಿನ ಹೊಸೂರು ಗ್ರಾಮದ ಇರ್ಫಾನ್ ಎಂ ಬಾತನನ್ನು ವಶಕ್ಕೆ ಪಡೆದಿದ್ದಾರೆ.
ವಾಹನ ಚಾಲಕ ನಯಾಝ್ ಪರಾರಿಯಾಗಿದ್ದಾನೆ. ಇರ್ಫಾನ್ನ ಮಾಹಿತಿಯಂತೆ ಲಾರಿ ಮಾಲಕ ಅಬ್ದುಲ್ ರಹಿಮಾನ್ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಶುಕ್ರವಾರ ಬೆಳಗಿನ ಜಾವ ಹಾಸನದಿಂದ ಕೇರಳದ ಕಡೆಗೆ ಕಂಟೈನರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಡಬ ಪೊಲೀಸ್ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ಅವರ ನೇತೃತ್ವದ ತಂಡವು ನೂಜಿಬಾಳ್ತಿಲ ಗ್ರಾಮದ ಕನ್ವಾರೆ ಎಂಬಲ್ಲಿ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂತು. ಕಡಬ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

