Tuesday, 20 Apr, 6.54 pm ಉದಯವಾಣಿ

ಟಾಪ್ 10 ಸುದ್ದಿ
ಕಲಬುರಗಿ : ಅಪಘಾತದಲ್ಲಿ ಗಂಭೀರ ಗಾಯಗೊಂಡ 6 ವರ್ಷದ ಬಾಲಕನಿಗೆ ವೆಂಟಿಲೇಟರ್ ಸಿಗದೆ ಸಾವು

ಕಲಬುರಗಿ: ಅಪಘಾತದಿಂದ ಗಂಭೀರ ಗಾಯಗೊಂಡ ಆರು ವರ್ಷದ ಬಾಲಕನಿಗೆ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಿಗದೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ವೇಳೆ ಮೃತಪಟ್ಟಿರುವ ಘಟನೆ ನಡೆದಿದೆ.

ನಗರದ ಐತಿಹಾಸಿಕ ಶರಣಬಸವೇಶ್ವರ ದರ್ಶನಕ್ಕಾಗಿ ಬಳ್ಳಾರಿಯಿಂದ ಕಲಬುರಗಿಗೆ ಬಂದಿದ್ದ ಕುಟುಂಬ ದರ್ಶನ ಮುಗಿಸಿ ಮರಳುವಾಗ ಕಲಬುರಗಿ- ಜೇವರ್ಗಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ಕೇಂದ್ರ ಕಾರಾಗೃಹ ಬಳಿ ಬಾಲಕನ ಮೂತ್ರ ವಿಸರ್ಜನೆಗಾಗಿ ವಾಹನ ನಿಲ್ಲಿಸಿದ್ದರು. ಈ ಸಂದರ್ಭ ರಸ್ತೆ ಬದಿ ನಿಂತಿದ್ದ ಬಾಲಕನಿಗೆ ಎದುರಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದ್ದರಿಂದ ಬಾಲಕ ಗಂಭೀರವಾಗಿ ಗಾಯಗೊಂಡ.

ಗಂಭೀರವಾಗಿ ಗಾಯಗೊಂಡ ಬಾಲಕ ಪ್ರಜ್ವಲ್ ನನ್ನು ಆಸ್ಪತ್ರೆಗೆ ದಾಖಲಿಸಲು ನಗರಕ್ಕೆ ಆಗಮಿಸಿದರು. ಆದರೆ ವೆಂಟಿಲೇಟರ್ ಸಿಗದೇ ಇರುವುದರಿಂದ ಆಸ್ಪತ್ರೆಗಳಿಗೆ ಅಲೆದಾಡಿದರು.

ಇದನ್ನೂ ಓದಿ :'ಸಂಪೂರ್ಣ ಲಾಕ್‍ಡೌನ್‍' ಹೇರುವಂತೆ ಸಿಎಂಗೆ ಸಚಿವರುಗಳಿಂದ ಮನವಿ

ಕಲಬುರಗಿಯ ಹಲವಾರು ಆಸ್ಪತ್ರೆ ಸುತ್ತಿದರೂ ವೆಂಟಿಲೇಟರ್ ಸೌಲಭ್ಯ ದೊರಕಲಿಲ್ಲ. ಹೀಗಾಗಿ ಚಿಕಿತ್ಸೆ ಗೆ ಅವಕಾಶ ಸಿಗಲಿಲ್ಲ.
ಚಿಕಿತ್ಸೆ ತೀರಾ ವಿಳಂಬವಾಗಿದ್ದರಿಂದ ಬಾಲಕ ಸಾವನ್ನಪ್ಪಲು ಕಾರಣ ಎಂದು ಪೋಷಕರು ಅಳಲು ತೋಡಿಕೊಂಡರು.

ನಾನ್ ಕೋವಿಡ್ ಪೇಷಂಟ್ ಗಳೂ ಸಹ ವೈದ್ಯಕೀಯ ಸೌಲಭ್ಯಕ್ಕಾಗಿ ಪರದಾಡುತ್ತಿರುವುದು ನಗರದಾದ್ಯಂತ ಕಂಡು ಬರುತ್ತಿದೆ.
ಕಲಬುರಗಿಯಲ್ಲಿ ಕೊರೊನಾ ಉಲ್ಬಣ ಹಿನ್ನಲೆ ಜಿಲ್ಲೆಯಲ್ಲಿ ವೆಂಟಿಲೇಟರ್, ಆಕ್ಷಿಜನ್ ಸೌಲಭ್ಯ ಕೊರತೆಯಾಗುತ್ತಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top