ಸಾಗರ: ಎರಡು ದಿನಗಳ ಹಿಂದೆ ಜಾಗೃತಿ ಕೆಲಸಕ್ಕೆ ತೆರಳಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿ ಉಗಿದು, ಅಸಭ್ಯವಾಗಿ ವರ್ತಿಸಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಾಸಕ ಎಚ್. ಹಾಲಪ್ಪ ಹರತಾಳು ಅವರು ಆರೋಪಿ ವಿರುದ್ಧ ತಕ್ಷಣ ದೂರು ದಾಖಲಿಸಬೇಕು ಎಂದು ಪೊೂಲೀಸರಿಗೆ ಸೂಚನೆ ನೀಡಿದ್ದಾರೆ.
ನಗರದ ಲೋಹಿಯಾ ನಗರಕ್ಕೆ ಆಶಾ ಕಾರ್ಯಕರ್ತೆಯರು ಕೋವಿಡ್ ಕಾರ್ಯಪಡೆಯ ಕರ್ತವ್ಯ ನಿರ್ವಹಿಸಲು ತೆರಳಿದಾಗ ವ್ಯಕ್ತಿಯೋರ್ವ ತನಗೆ ಕೋವಿಡ್ ಬಂದಿರುವ ವಿಚಾರ ನಿಮ್ಮಿಂದಾಗಿ ಅಕ್ಕ ಪಕ್ಕದ ಮನೆಯವರಿಗೆ ತಿಳಿದು ನಮ್ಮನ್ನು ಅನುಮಾನದಿಂದ ನೋಡುತ್ತಿದ್ದಾರೆ. ಇದಕ್ಕೆ ನೀವೇ ಕಾರಣ ಎಂದು ಅವಾಚ್ಯವಾಗಿ ನಿಂದಿಸಿ, ಅನುಚಿತವಾಗಿ ವರ್ತಿಸಿದ ಘಟನೆ ನಡೆದಿತ್ತು. ವಿಷಯದ ಮಾಹಿತಿ ಪಡೆದ ಶಾಸಕ ಹಾಲಪ್ಪ ಆಶಾ ಕಾರ್ಯಕರ್ತೆಯರ ಸಭೆ ನಡೆಸಿ, ಕೊರೊನಾ ವಾರಿಯರ್ಸ್ಗಳಾಗಿ ನೀವು ಸೋಂಕಿತರ ಬಗ್ಗೆ ಅರಿವಿಲ್ಲದೆ ನೇರ ಸಂಪರ್ಕದಲ್ಲಿರುತ್ತೀರಿ.
ಕೋವಿಡ್ ಕುರಿತ ಎಲ್ಲಾ ಲೇಟೆಸ್ಟ್ ಅಪ್ಡೇಟ್ಸ್ ಓದಿ
ನಿಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದೀರಿ. ಇಂತಹ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಈ ರೀತಿ ವರ್ತಿಸುತ್ತಿರುವುದು ಗಮನಕ್ಕೆ ಬಂದಿದೆ. ಮುಂದೆ ಈ ರೀತಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಆತ್ಮಸ್ಥೈರ್ಯ ತುಂಬಿದರು. ಇದೇ ವೇಳೆ ಆಶಾ ಕಾರ್ಯಕರ್ತೆಯರಿಗೆ ಅವರು ಫೇಸ್ ಶೀಲ್ಡ್ ಮಾಸ್ಕ್ಗಳನ್ನು ವಿತರಿಸಿದರು.
ನಗರಸಭಾಧ್ಯಕ್ಷೆ ಮಧುರಾ ಶಿವಾನಂದ, ಉಪಾಧ್ಯಕ್ಷ ವಿ. ಮಹೇಶ್, ಸದಸ್ಯರಾದ ಗಣೇಶ್ ಪ್ರಸಾದ್, ಸಂತೋಷ್ ಶೇಟ್, ಮೈತ್ರಿ ಪಾಟೀಲ್, ಸೀಮಾ ಕಿರಣ್ ಸಿಂಗ್, ಆರೋಗ್ಯ ಇಲಾಖೆ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮ.ಸ ನಂಜುಡಸ್ವಾಮಿ ಇತರರು ಇದ್ದರು.

