ಕೋಲ್ಕತಾ: ಕಳೆದ ಡಿಸೆಂಬರ್ನಲ್ಲಿ ಅರ್ಜೆಂಟೀನಾದ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾರತಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕೋಲ್ಕಾತದಲ್ಲಿ ನಡೆದ ಕಾರ್ಯಕ್ರದಲ್ಲಿ ಅಭಿಮಾನಿಗಳು ದಾಂಧಲೆ ನಡೆಸಿರುವ ವಿಚಾರಕ್ಕೆ ಸಂಬಂಧಿಸಿ ಕಾರ್ಯಕ್ರಮದ ಆಯೋಜಕ ಸತಾರ್ದು ದತ್ತ ಪ್ರತಿಕ್ರಿಯಿಸಿದ್ದಾರೆ.
ಇದಕ್ಕೆಲ್ಲ ಆಗ ಕ್ರೀಡಾ ಸಚಿವರಾಗಿದ್ದ ಅರೂಪ್ ಬಿಸ್ವಾಸ್ ಕಾರಣ. ಅವರ ವಿರುದ್ಧ 100 ಕೋಟಿ ರೂ. ಮಾನನಷ್ಟದ ದೂರು ದಾಖಲಿಸುವುದಾಗಿ ಸತಾರ್ದು ಹೇಳಿದ್ದಾರೆ. ಮೈದಾನದಲ್ಲಿ ಮೆಸ್ಸಿ ಇದ್ದಾಗ ಫೋಟೋ ಕ್ಲಿಕ್ಕಿಸಬೇಡಿ, ಕಿರಿಕಿರಿ ಮಾಡಬೇಡಿ ಎಂದು ನಾನು ಬೇಡಿಕೊಂಡೆ. ಆದರೂ ಆತ (ಬಿಸ್ವಾಸ್) ತನ್ನ ಅಧಿಕಾರವನ್ನು ಬಳಸಿಕೊ ಫೋಟೋ ಕ್ಲಿಕ್ಕಿಸಿದ, ವೇದಿಕೆಯ ಬಳಿ ಹೆಚ್ಚು ಜನ ಸೇರುವ ಹಾಗೆ ಮಾಡಿ ನನ್ನ ಕಾರ್ಯಕ್ರಮವನ್ನೇ ಹಾಳು ಗೆಡವಿದ. ಪ್ರಕರಣದಲ್ಲಿ ನಾನು 38 ದಿನ ಜೈಲು ಶಿಕ್ಷೆ ಅನುಭವಿಸಿದೆ. ಈಗ ಜಾಮೀನಿನ ಮೇಲೆ ಹೊರಗೆ ಬಂದಿದ್ದೇನೆ. ಶೀಘ್ರವೇ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಎಲ್ಲಾ ವಿಚಾರವನ್ನು ಬಹಿರಂಗಪಡಿಸುತ್ತೇನೆ ಎಂದು ಸತಾರ್ದು ಹೇಳಿಕೊಂಡಿದ್ದಾರೆ. ಇತ್ತೀಚಿನ ಚುನಾವಣೆಯಲ್ಲಿ ಬಿಸ್ವಾಸ್ ಸೋತಿದ್ದರಿಂದ ಸತಾರ್ದು ಹಳೆ ಪ್ರಕರಣವನ್ನು ಕೆದಕಿದ್ದಾರೆ.
ಡಿ.13ರಿಂದ 15ರವರಗೆ ಭಾರತದಲ್ಲಿದ್ದ ಮೆಸ್ಸಿ ಕೋಲ್ಕತಾಕ್ಕೂ ಭೇಟಿ ನೀಡಿದ್ದರು. ಈ ವೇಳೆ ಮೈದಾನದಲ್ಲಿ ಕಿರಿಕಿರಿ ಅನ್ನಿಸಿದ್ದರಿಂದ ಅವರ ಕೇವಲ 25 ನಿಮಿಷದಲ್ಲೇ ಮೈದಾನದಿಂದ ತೆರಳಿದರು. ಇದರಿಂದ ಕೆರಳಿದ ಅಭಿಮಾನಿಗಳು ಮೈದಾನದಲ್ಲಿ ದಾಂಧಲೆ ಎಬ್ಬಿಸಿದ್ದರು.

