ಬೆಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ಜೋರಾಗಿದೆ ಎನಿಸಿದರೂ ಈ ಬಾರಿ ವಾಡಿಕೆಗಿಂತ ಶೇ.8ರಷ್ಟು ಕಡಿಮೆ ಮಳೆ ದಾಖಲಾಗಿದೆ.
2021ರ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ 852 ಮಿಮೀ ಮಳೆಯಾಗಬೇಕಿತ್ತು. ಆದರೆ, ಈ ಬಾರಿ 787 ಮಿಮೀ ಮಳೆಯಾಗಿದೆ.
ಪ್ರಮುಖವಾಗಿ ರಾಜ್ಯದ ಮೈಸೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ಬಾರಿ ಕಡಿಮೆ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.27, ಮೈಸೂರಿನಲ್ಲಿ ಶೇ.25 ಮತ್ತು ಕೊಡಗಿನಲ್ಲಿ ಶೇ.23ರಷ್ಟು ಕಡಿಮೆ ಮಳೆಯಾಗಿದೆ. ಇದರ ಪರಿಣಾಮ ಕೆಆರ್ ಎಸ್ ತುಂಬುವುದರ ಮೇಲೆಯೂ ಪರಿಣಾಮ ಬೀರಿದೆ. ಕೆಆರ್ ಎಸ್ ತುಂಬಲು ಇನ್ನೂ 3 ಮೀ. ಬಾಕಿ ಇದೆ.
ಆಗಸ್ಟ್ನಲ್ಲಿ ಕಡಿಮೆ, ಅಕ್ಟೋಬರ್ನಲ್ಲಿ ಹೆಚ್ಚಳ
ಆಗಸ್ಟ್ ನಲ್ಲಿ ಮಳೆ ಕಡಿಮೆಯಾಗಿದ್ದು, ಅಕ್ಟೋಬರ್ ನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಆಗಸ್ಟ್ ನಲ್ಲಿ ವಾಡಿಕೆ ಮಳೆಯು 220 ಮಿಮೀ ಆಗಬೇಕಿದ್ದು, 150 ಮಿಮೀ ಮಳೆಯಷ್ಟೇ ಆಗಿದೆ. ವಾಡಿಕೆಗಿಂತ ಶೇ32ರಷ್ಟು ಕಡಿಮೆ ಮಳೆಯಾಗಿದೆ. ಆದರೆ, ಅಕ್ಟೋಬರ್ ನಲ್ಲಿ ಅ.1ರಿಂದ 16ರ ವರೆಗೆ 83 ಮಿಮೀ ವಾಡಿಕೆ ಮಳೆ ಸುರಿಯಬೇಕಿದ್ದು, 122 ಮಿಮೀ ಮಳೆಯಾಗಿದೆ. ಶೇ.48ರಷ್ಟು ಹೆಚ್ಚಳವಾಗಿದೆ.
ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದರಿಂದಲೇ ಅಕ್ಟೋಬರ್ ವಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಜಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ :ಬೆಂಗಳೂರು: ಭಾರಿ ಬಿರುಕಿನಿಂದ ವಾಲಿದ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ
ಮುಂಗಾರು ಹಂಗಾಮಿನಲ್ಲಿ ಕಡಿಮೆ ಮಳೆಯಾದ ಜಿಲ್ಲೆಗಳು
ದಕ್ಷಿಣ ಕನ್ನಡ ಶೇ.27, ಮೈಸೂರು ಶೇ.25, ಕೊಡಗು ಶೇ.23, ಹಾವೇರಿ ಶೇ.13, ಶಿವಮೊಗ್ಗ ಶೇ.15, ಹಾಸನ ಶೇ.16, ಚಿಕ್ಕಮಗಳೂರು ಶೇ.18, ಉಡುಪಿ ಶೇ.14, ರಾಮನಗರದಲ್ಲಿ ಶೇ.6, ಚಾಮರಾಜನಗರ ಶೇ.5, ಮಂಡ್ಯ ಶೇ.3, ಬಳ್ಳಾರಿ ಶೇ.9, ರಾಯಚೂರು ಶೇ.7, ಯಾದಗಿರಿ ಶೇ.6ರಷ್ಟು ಮಳೆ ಕಡಿಮೆಯಾಗಿದೆ.
ಎರಡು ದಿನದಲ್ಲಿ ಮುಂಗಾರು ಅಂತ್ಯ
ಮುಂದಿನ ಎರಡು ದಿನಗಳಲ್ಲಿ ಮುಂಗಾರು ಮಳೆ ಮುಗಿಯಲಿದೆ. ನಂತರ ಮಳೆಗೆ ಬಿಡುವು ಸಿಗಲಿದ್ದು, ನಂತರ ಹಿಂಗಾರು ಮಳೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

