ಕೊಲಂಬೋ: ಭಾರತದಲ್ಲಿ ಉಳಿದುಕೊಂಡಿರುವ ಶ್ರೀಲಂಕಾದ ನಿರಾಶ್ರಿತರು ಸ್ವದೇಶಕ್ಕೆ ಹಿಂದಿರುಗಲು ವಿಶೇಷ ಅವಕಾಶವನ್ನು ಅಲ್ಲಿನ ಸರ್ಕಾರ ಒದಗಿಸಿಕೊಟ್ಟಿದೆ. ಸೂಕ್ತ ಪ್ರಯಾಣ ದಾಖಲೆಗಳಿಲ್ಲದೆಯೂ ಭಾರತಕ್ಕೆ ಪ್ರಯಾಣಿಸಿದ್ದವರಿಗೆ ಮರಳಲು ಅವಕಾಶ ನೀಡಲಾಗಿದೆ.
ಶ್ರೀಲಂಕಾ ನಾಗರಿಕ ಯುದ್ಧದ ವೇಳೆ ಬಹಳಷ್ಟು ಜನ ದೇಶ ತೊರೆದಿದ್ದರು.
ಇವರಲ್ಲಿ ಸುಮಾರು 90000 ಮಂದಿ ತಮಿಳುನಾಡಿನಲ್ಲಿ ವಾಸ ಮಾಡುತ್ತಿದ್ದು, ಅವರಿಗೆ ಹಿಂದಿರುಗಲು ಅವಕಾಶ ಒದಗಿಸಲಾಗಿದೆ. 2002ರಿಂದ 2022ರ ಅವಧಿಯಲ್ಲಿ ಸುಮಾರು 18000 ಮಂದಿ ನಿರಾಶ್ರಿತರು ಲಂಕಾಕ್ಕೆ ಹಿಂದಿರುಗಿದ್ದರು.
ಹೊಸ ಆದೇಶದ ಪ್ರಕಾರ ಶ್ರೀಲಂಕಾಕ್ಕೆ ತೆರಳುವ ನಿರಾಶ್ರಿತರು, ಶ್ರೀಲಂಕಾದಲ್ಲಿ ವಾಸ ಮಾಡಿದ್ದಕ್ಕೆ ಗುರುತನ್ನು ನೀಡಿ ಲಂಕಾದಲ್ಲಿ ಮತ್ತೆ ಆಶ್ರಯ ಪಡೆದುಕೊಳ್ಳಬಹುದಾಗಿದೆ. ಲಂಕಾ ಪ್ರವೇಶದ ವೇಳೆ ಅಧಿಕಾರಿಗಳು ಹಾಗೂ ಲಂಕಾದ ಗುಪ್ತಚರ ಇಲಾಖೆ ಅವರ ಪರಿಶೀಲನೆ ನಡೆಸಲಿದೆ. ಅವಕಾಶ ಪಡೆದುಕೊಂಡವರಿಗೆ ತಾತ್ಕಾಲಿಕ ಪಾಸ್ಪೋರ್ಟ್ ನೀಡಲಾಗುವುದು. ಅವರೆಲ್ಲರೂ ಯಾವುದೇ ದಾಖಲೆಗಳನ್ನು ಸಲ್ಲಿಸದೇ ಶ್ರೀಲಂಕಾಕ್ಕೆ ಪ್ರವೇಶ ಪಡೆಯಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ ಸಂಭವಿಸಿದ ನಾಗರಿಕ ಯುದ್ಧದ ಸಮಯದಲ್ಲಿ ದೇಶ ತೊರೆದ ಶ್ರೀಲಂಕಾ ಪ್ರಜೆಗಳಿಗೆ ಮರಳಿ ಅವಕಾಶ ನೀಡುವುದು ಇದರ ಮುಖ್ಯ ಉದ್ದೇಶ ಎನ್ನಲಾಗಿದೆ.

