ಕಾಪು: ರಸ್ತೆ ದಾಟುತ್ತಿದ್ದ ಮಹಿಳೆಗೆ ಎಕ್ಸ್ ಪ್ರೆಸ್ ಬಸ್ ಢಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಉದ್ಯೋಗಿಯಾಗಿದ್ದ ಶ್ರೀಮತಿ ಭಟ್ (73) ಮೃತ ಮಹಿಳೆ.
ಪಾಂಗಾಳ ಮತ್ತು ಕಾಪುವಿನಲ್ಲಿ ಮನೆ ಹೊಂದಿರುವ ಅವರು ಕಾಪುವಿನಿಂದ ಪಾಂಗಾಳಕ್ಕೆ ಬಂದು, ಅಲ್ಲಿ ಹಾಲು ಖರೀದಿಸಿ, ಮನೆಗೆ ತೆರಳಲು ರಸ್ತೆ ಧಾಟುತ್ತಿದ್ದ ವೇಳೆ ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಭಾರತಿ ಎಕ್ಸ್ಪ್ರೆಸ್ ಬಸ್ ಢಿಕ್ಕಿ ಹೊಡೆದಿದೆ.
ಬಸ್ ಢಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ರಸ್ತೆಗೆ ಎಸೆಯಲ್ಪಟ್ಟಿದ್ದು ತಲೆಗೆ ಗಂಭೀರ ಏಟಾಗಿದೆ. ವಿಪರೀತ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಬಳಿಕ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಅಂಬುಲೆನ್ಸ್ ಮೂಲಕ ಶವಾಗಾರಕ್ಕೆ ಸಾಗಿಸಲಾಗಿದೆ.
ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಮೃತ ಮಹಿಳೆಯ ಪತಿ ಕೆಲವು ವರ್ಷದ ಹಿಂದೆ ಉದ್ಯಾವರ ಸೇತುವೆ ಬಳಿ ಅಪಘಾತಕ್ಕೊಳಗಾಗಿ ಮೃತಪಟ್ಟಿದ್ದು, ಓರ್ವ ಮಗಳನ್ನು ಅಗಲಿದ್ದಾರೆ.

