Team Udayavani, Aug 12, 2022, 3:09 PM IST
ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಡಿಯಲ್ಲಿ ನಡೆಸುವ ಶಿಕ್ಷಕರ ನೇಮಕ ಕಾಯಿದೆಗೆ ರಾಜ್ಯ ಸರಕಾರ ತಿದ್ದುಪಡಿ ತಂದಿದೆ.
ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಹಾಲಿ ಇರುವ ವಯೋಮಿತಿಯನ್ನು ಮತ್ತೆ ಎರಡು ವರ್ಷ ಹೆಚ್ಚಳ ಮಾಡಲಾಗಿದೆ.
ಪರಿಶಿಷ್ಟ ಜಾತಿ, ವರ್ಗಕ್ಕೆ 47 ವರ್ಷ, ಹಿಂದುಳಿದ ವರ್ಗಕ್ಕೆ 45 ವರ್ಷ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 42 ವರ್ಷದವರೆಗೆ ಶಿಕ್ಷಕರ ನೇಮಕ ಪರೀಕ್ಷೆ ಬರೆಯುವುದಕ್ಕೆ ಇನ್ನು ಮುಂದೆ ಅವಕಾಶ ಲಭ್ಯವಾಗಲಿದೆ.
ಸುಮಾರು 15000 ಶಿಕ್ಷಕರ ನೇಮಕ ಮಾಡಿಕೊಳ್ಳುವುದಕ್ಕೆ ಸರಕಾರ ಮತ್ತೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ನಿಗದಿತ ಅಂಕ ಪಡೆಯದ ಕಾರಣಕ್ಕೆ ನೇಮಕ ಪೂರ್ತಿಯಾಗಿಲ್ಲ. ಒಂದೆಡೆ ಹುದ್ದೆ ಖಾಲಿ ಇದ್ದರೆ, ಇನ್ನೊಂದೆಡೆ ಅಭ್ಯರ್ಥಿಗಳ ವಯೋಮಿತಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ನಿಯಮಕ್ಕೆ ತಿದ್ದುಪಡಿ ಮಾಡಲಾಗಿದೆ. ಜತೆಗೆ ಕಟ್ ಆಫ್ ಮಾರ್ಕ್ಸ್ ಪ್ರಮಾಣವನ್ನು ಶೇ.60ರಿಂದ ಶೇ.50ಕ್ಕೆ ಇಳಿಕೆ ಮಾಡಲಾಗಿದೆ. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ನೇಮಕಗಳೆರಡಕ್ಕೂ ಈ ನಿಯಮ ಅನ್ವಯವಾಗಲಿದೆ.
Disclaimer
This story is auto-aggregated by a computer program and has not been created or edited by Dailyhunt Publisher: Udayavani