ಬೆಂಗಳೂರು: ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸದಸ್ಯತ್ವವು ನ್ಯಾಯಾಲಯದ ಆದೇಶ ಹೊರಬೀಳುತ್ತಿದ್ದಂತೆ ತನ್ನಿಂತಾನೇ ರದ್ದಾಗಿರುತ್ತದೆ. ಇದರಲ್ಲಿ ಸ್ಪೀಕರ್ ಪಾತ್ರ ಏನೂ ಇರುವುದಿಲ್ಲ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸ್ಪಷ್ಟನೆ ನೀಡಿದರು.
ಈ ಹಿಂದೆ ಜನಾರ್ದನ ರೆಡ್ಡಿ ಪ್ರಕರಣದಲ್ಲಿ ಕೋರ್ಟ್ ಆದೇಶ ಹೊರಬಿದ್ದ ಕೆಲವೇ ದಿನದಲ್ಲಿ ಸದಸ್ಯತ್ವ ತೆರವಾಗಿರುವ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಿದ್ದ ಸ್ಪೀಕರ್ ಕಚೇರಿ, ಇದೀಗ ವಿನಯ್ ಕುಲಕರ್ಣಿ ವಿಚಾರದಲ್ಲಿ ತಡ ಮಾಡುತ್ತಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದರು.
ಬುಧವಾರ ವಿಧಾನಸೌಧದಲ್ಲಿ ಮಾತನಾಡಿ, ನಿಯಮದ ಪ್ರಕಾರ ಶಿಕ್ಷೆಗೆ ಒಳಪಟ್ಟ ಕೂಡಲೇ ಸ್ವಯಂಚಾಲಿತವಾಗಿ ಸದಸ್ಯತ್ವ ಅನರ್ಹಗೊಂಡಿರುತ್ತದೆ. ಆ ಆದೇಶಕ್ಕೆ ತಡೆಯಾಜ್ಞೆ ಸಿಕ್ಕಿದರೆ ಮತ್ತೆ ಅವರ ಸದಸ್ಯತ್ವ ತನ್ನಿಂತಾನೆ ರಕ್ಷಣೆ ಆಗುತ್ತದೆ. ಇದೆರಡನ್ನೂ ನಿರ್ಧರಿಸುವ ಅಧಿಕಾರವು ಸ್ಪೀಕರ್ಗೆ ಇಲ್ಲ ಎಂದರು. ಇಂಟಿಮೇಷನ್ ಕೊಡುವುದು ಮಾತ್ರ ನನ್ನ ಕೆಲಸ. ಈ ಬಗ್ಗೆ ಪರಿಶೀಲಿಸಲು ಕಾರ್ಯದರ್ಶಿಗೆ ಸೂಚಿಸಿದ್ದೇನೆ. ಇದರಲ್ಲಿ ತಾರತಮ್ಯ ವಿಚಾರವೇ ಬರುವುದಿಲ್ಲ. ನ್ಯಾಯಾಲಯ ಆದೇಶ ಕೊಟ್ಟ ಕೂಡಲೇ ಸದಸ್ಯತ್ವ ರದ್ದಾಗುತ್ತದೆ ಎಂದ ಮೇಲೆ ಸ್ಪೀಕರ್ ತಾರತಮ್ಯ ಮಾಡಿದ ಹಾಗೆ ಹೇಗಾಗುತ್ತದೆ? ಎಂದು ಮರುಪ್ರಶ್ನೆ ಹಾಕಿದರು.
ಯಾವುದೇ ಸದಸ್ಯನ ಸದಸ್ಯತ್ವ ರದ್ದು ಮಾಡುವ ಅಧಿಕಾರ ಸ್ಪೀಕರ್ ಇಲ್ಲ. ಎಲ್ಲಿಯಾದರೂ ಉಂಟಾ? ಸದನ ನಡೆಯುತ್ತಿರುವಾಗ ಹೆಚ್ಚೂ ಕಡಿಮೆ ಆದಾಗ ಮಾತ್ರ ನನಗೆ ನಿಯಮಾವಳಿಯಲ್ಲಿ ಆ ಅವಕಾಶ ಇದೆ ಎಂದರು.

