ಉಡುಪಿ: ಕೇರಳದ ಪಾಲಕ್ಕಾಡ್ ವಿಭಾಗದಲ್ಲಿದ್ದ ಮಂಗಳೂರು ರೈಲ್ವೇ ವ್ಯವಸ್ಥೆಯನ್ನು ಮೈಸೂರು ವಿಭಾಗಕ್ಕೆ ಸೇರ್ಪಡೆ ಗೊಳಿಸಿರುವುದಕ್ಕೆ ಕೇರಳ ಸರಕಾರ ಪ್ರತಿಭಟನೆ ವ್ಯಕ್ತಪಡಿಸಿದೆ. ಆದರೆ ಕೇರಳ ಸರಕಾರದ ಬೆದರಿಕೆಗೆ ರೈಲ್ವೇ ಇಲಾಖೆ ಮಣಿಯುವುದಿಲ್ಲ ಮತ್ತು ಕರ್ನಾಟಕದ ಜನ ಆತಂಕ ಪಡುವ ಅಗತ್ಯವಿಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಈ ಬಗ್ಗೆ ಸಚಿವ ವಿ. ಸೋಮಣ್ಣ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಕೇರಳ ಸರಕಾರ ಮತ್ತು ಅಲ್ಲಿನ ಸಂಸದರು ಎಷ್ಟೇ ವಿರೋಧಿಸಿದರೂ ನಮ್ಮ ನಿಲುವಿನಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಸಾಕಷ್ಟು ಆದಾಯ ಬರುತ್ತದೆ. ಕರ್ನಾಟಕದ ಕರಾವಳಿ ಭಾಗದ ರೈಲ್ವೇ ಅಭಿವೃದ್ಧಿಗೂ ಇದರಿಂದ ಬಹದೊಡ್ಡ ಕೊಡುಗೆ ಆಗಲಿದೆ.
ಮುಂದಿನ ದಿನಗಳಲ್ಲಿ ಕೊಂಕಣ ರೈಲ್ವೇ ಭಾರತೀಯ ರೈಲ್ವೇ ಜತೆಗೆ ವಿಲೀನ, ರೈಲ್ವೇ ಹಳಿ ಡಬಲಿಂಗ್, ಹೊಸ ರೈಲು ಯೋಜನೆ ಸಹಿತ ಅನೇಕ ಯೋಜನೆಗಳ ಕುರಿತು ನಮ್ಮ ಪ್ರಯತ್ನ ಮುಂದುವರಿಸಲಾಗುತ್ತದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

