ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, 'ಲವ್ ಜಿಹಾದ್' ಮತ್ತು 'ಲ್ಯಾಂಡ್ ಜಿಹಾದ್' ವಿರುದ್ಧವಾಗಿ ಕಠಿನ ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಹೇಳಿಕೆ ನೀಡಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಭಟ್ಟಾಚಾರ್ಯ, ಈ ಚುನಾವಣೆಯನ್ನು ಕೇವಲ ಬಿಜೆಪಿ ಮತ್ತು ಆಡಳಿತಾರೂಢ ಟಿಎಂಸಿ ನಡುವಿನ ಸ್ಪರ್ಧೆಯಲ್ಲ, ಬದಲಾಗಿ "ಬಂಗಾಳಿ ಹಿಂದೂಗಳ ಅಸ್ತಿತ್ವ, ರಾಷ್ಟ್ರೀಯವಾದಿ, ವಿಚಾರವಾದಿ ಮುಸ್ಲಿಮರ ನಾಗರಿಕತೆಯ ಉಳಿವಿನ ನಿರ್ಣಾಯಕ ಯುದ್ಧ'' ಎಂದು ಬಿಂಬಿಸಿದ್ದಾರೆ.
ಬಿಜೆಪಿ ನಾಯಕ ಬಾಂಗ್ಲಾದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳು, ಪಶ್ಚಿಮ ಬಂಗಾಳದ ಗಡಿ ಜಿಲ್ಲೆಗಳಲ್ಲಿ ಬದಲಾಗುತ್ತಿರುವ ಜನಸಂಖ್ಯಾಶಾಸ್ತ್ರ, ಎಸ್ಐಆರ್ ಮತ್ತು ಟಿಎಂಸಿಯ ಅಲ್ಪಸಂಖ್ಯಾಕರ ತುಷ್ಟೀಕರಣ ನೀತಿ ವಿಚಾರಗಳನ್ನು ಪ್ರಸ್ತಾವಿಸಿದರು.
294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿವೆ. ಮತಗಳ ಎಣಿಕೆ ಮೇ 4 ರಂದು ನಡೆಯಲಿದೆ.

