ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ವಿರುದ್ಧ ಗುರುವಾರ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ''ಅವರು ಭಾರತದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿಯಾಗಿದ್ದಾರೆ'' ಎಂದು ಆರೋಪಿಸಿದರು. ಅದೇ ವೇಳೆ, ಬಿಜೆಪಿ ನಾಯಕತ್ವವು ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಜಮೀನುಗಳನ್ನು ಬೃಹತ್ ಕಾರ್ಪೊರೇಟ್ ಕಂಪೆನಿಗಳಿಗೆ ವರ್ಗಾಯಿಸುತ್ತಿದೆ ಎಂಬುದಾಗಿಯೂ ಆರೋಪಿಸಿದರು.
ಬೊಕಾಜನ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಿದ ರಾಹುಲ್, ಹಿಮಂತ ಶರ್ಮ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ ಸೇರಿಕೊಂಡು ಅಸ್ಸಾಮ್ ನಲ್ಲಿ ''ಜಮೀನು ಎಟಿಎಮ್'ಒಂದನ್ನು ರಚಿಸಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಮೂರು ಬೃಹತ್ ಕಾರ್ಪೊರೇಟ್ ಕಂಪೆನಿಗಳಿಗೆ ಒಟ್ಟು 98,400 ಬಿಗಾ (ಸುಮಾರು 61,000 ಎಕರೆ) ಭೂಮಿಯನ್ನು ಹಸ್ತಾಂತರಿಸಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
''ಈ ಜಮೀನುಗಳನ್ನು ಜನರಿಂದ ಕಸಿದುಕೊಳ್ಳಲಾಗಿದೆ. ನರೇಂದ್ರ ಮೋದಿ, ಅಮಿತ್ ಶಾ ಮತ್ತು ಹಿಮಂತ ಬಿಸ್ವ ಶರ್ಮ ಅಸ್ಸಾಮ್ನಲ್ಲಿ ಜಮೀನು ಎಟಿಎಮ್ ಒಂದನ್ನು ಸ್ಥಾಪಿಸಿದ್ದಾರೆ. ಅವರು ಜನರಿಂದ ಜಮೀನುಗಳನ್ನು ಕಸಿದುಕೊಂಡು ದೊಡ್ಡ ಕೈಗಾರಿಕೋದ್ಯಮಿಗಳಿಗೆ ಕೊಡುತ್ತಾರೆ'' ಎಂದು ಅವರು ಹೇಳಿದರು.

