ಹೊಸದಿಲ್ಲಿ: ಪದಚ್ಯುತಗೊಂಡ ಬಳಿಕ ಭಾರತದಲ್ಲಿ ನೆಲೆಸಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಡಿಸೆಂಬರ್ನಲ್ಲಿ ಬಾಂಗ್ಲಾದೇಶಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. "ಡಿಸೆಂಬರ್ ನಮ್ಮ ವಿಜಯದ ತಿಂಗಳು. ನಾನು ಆ ತಿಂಗಳಲ್ಲಿ ಮರಳಲು ಬಯಸಿದ್ದೇನೆ.
ಸೂಕ್ತ ಸಮಯದಲ್ಲಿ ನಿಖರ ದಿನಾಂಕವನ್ನು ಬಹಿರಂಗಪಡಿಸುತ್ತೇನೆ" ಎಂದು ಅವರು ಹೇಳಿದರು.
ಹೊಸದಿಲ್ಲಿಯಲ್ಲಿ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಏಕೈಕ ಬಾಂಗ್ಲಾದೇಶಿ ಪತ್ರಕರ್ತೆ ಎಂದು ತಮ್ಮನ್ನು ಪರಿಚಯಿಸಿಕೊಂಡ ಸುಲ್ತಾನಾ ರೆಹಮಾನ್, ಬಾಂಗ್ಲಾದೇಶದಲ್ಲಿ ದೇಶದ ಈಗಿನ ಬೆಳವಣಿಗೆಗಳು ಮತ್ತು 1971ರ ವಿಮೋಚನಾ ಹೋರಾಟದ ಪರಂಪರೆಯ ಬಗ್ಗೆ ಅನೇಕ ಜನರು ತೀವ್ರ ನೋವು ಮತ್ತು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಬಳಿಕ, ಡಿಸೆಂಬರ್ನಲ್ಲಿ ಬಾಂಗ್ಲಾದೇಶಕ್ಕೆ ಮರಳಲಿದ್ದಾರೆ ಎಂಬ ಊಹಾಪೋಹಗಳ ಕುರಿತು ಉಲ್ಲೇಖಿಸಿ, ಹಸೀನಾ ಅವರ ಮರಳುವ ಸಮಯದ ಬಗ್ಗೆ ಸ್ಪಷ್ಟನೆ ಕೋರಿದರು. ಇದಕ್ಕೆ ಉತ್ತರಿಸಿದ ಹಸೀನಾ, "ಡಿಸೆಂಬರ್ ನಲ್ಲಿ ಹಿಂತಿರುಗಲು ಬಯಸುತ್ತೇನೆ. ಡಿಸೆಂಬರ್ ನಮ್ಮ ವಿಜಯದ ತಿಂಗಳು. ಸೂಕ್ತ ಸಮಯದಲ್ಲಿ ದಿನಾಂಕವನ್ನು ಪ್ರಕಟಿಸುತ್ತೇನೆ" ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಸೀನಾ ಅವರ ಪುತ್ರ ಸಜೀಬ್ ವಾಜೇದ್ ಜಾಯ್, ಭಾರತ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
"ತಾಯಿ ಭಾರತಕ್ಕೆ ಬಂದ ದಿನದಿಂದಲೇ ಅವರನ್ನು ರಾಷ್ಟ್ರದ ಮುಖ್ಯಸ್ಥೆಯಂತೆ ನಡೆಸಿಕೊಳ್ಳಲಾಗಿದೆ. ಅವರಿಗೆ ಅತ್ಯುನ್ನತ ಗೌರವ, ಎಲ್ಲ ಅಗತ್ಯ ಸೇವೆಗಳು ಹಾಗೂ ಕಠಿಣ ಭದ್ರತೆ ಒದಗಿಸಲಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ" ಎಂದು ಅವರು ಹೇಳಿದರು.
ಈ ನಡುವೆ, ಶೇಖ್ ಹಸೀನಾ ಅವರ ಭಾಷಣಗಳನ್ನು ಬಾಂಗ್ಲಾದೇಶದ ಮಾಧ್ಯಮಗಳು ಪ್ರಕಟಿಸಬಾರದು ಅಥವಾ ಪ್ರಸಾರ ಮಾಡಬಾರದು ಎಂದು ಬಿಎನ್ಪಿ ನೇತೃತ್ವದ ಸರಕಾರ ಈ ಹಿಂದೆ ಸೂಚಿಸಿತ್ತು.
ಇದೇ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶದ ಮಾಜಿ ಕ್ರಿಕೆಟಿಗ ಹಾಗೂ ಅವಾಮಿ ಲೀಗ್ ಮುಖಂಡ ಶಕೀಬ್ ಅಲ್ ಹಸನ್ ಭಾಗವಹಿಸಿದರು. ಶಕೀಬ್ ಅಲ್ ಹಸನ್ ಅವರು ಮಗುರಾ-1 ಕ್ಷೇತ್ರದಿಂದ ಅವಾಮಿ ಲೀಗ್ ಸಂಸದರಾಗಿ ಆಯ್ಕೆಯಾಗಿದ್ದರು. 2024ರ ಆಗಸ್ಟ್ನಲ್ಲಿ ಶೇಖ್ ಹಸೀನಾ ಸರಕಾರ ಪದಚ್ಯುತಗೊಂಡ ಬಳಿಕ ಅವರ ರಾಜಕೀಯ ಜೀವನದಲ್ಲಿ ತೀವ್ರ ಹಿನ್ನಡೆ ಉಂಟಾಯಿತು. ನಂತರ ಅವರು ಟೀಕೆಗಳು ಮತ್ತು ಕಾನೂನು ಸವಾಲುಗಳನ್ನು ಎದುರಿಸಿದ್ದು, ವಿದೇಶಕ್ಕೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

